'ರಾಷ್ಟ್ರ ನಿರ್ಮಾಣದಲ್ಲಿ ಸಾರಸ್ವತರ ಕೊಡುಗೆ ಅಪಾರ' : ಪರಿಕ್ಕರ್
ಉಡುಪಿ, ಡಿಸೆಂಬರ್. 26 : ರಾಷ್ಟ್ರ ನಿರ್ಮಾಣದಲ್ಲಿ ಸಾರಸ್ವತ ಸಮಾಜದ ಕೊಡುಗೆ ದೊಡ್ಡದಿದ್ದು, ಸಾರಸ್ವತ ಸಮಾಜ ಆದರ್ಶ ಸಮಾಜವಾಗಿ ಹೊರಹೊಮ್ಮಿ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದರು.
ಜಿಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ವತಿಯಿಂದ ಪಡುಬಿದ್ರಿ ಸಮೀಪದ ಹೆಜಮಾಡಿಯಲ್ಲಿ ಭಾನುವಾರ ನಡೆದ ವಿಶ್ವ ಜಿಎಸ್ ಬಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋವಾದಿಂದ ರಾಷ್ಟ್ರದಾದ್ಯಂತ ಹಬ್ಬಿರುವ ಸಾರಸ್ವತರು ರಾಷ್ಟ್ರ ನಿರ್ಮಾಣದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

ಸಾರಸ್ವತರ ಹಿರಿಮೆ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಕಾನೂನು, ಆರೋಗ್ಯ ಹಾಗೂ ಇತರೆ ಸೇವಾ ಕ್ಷೇತ್ರಗಳಲ್ಲಿ ಕಾಣಲು ಸಿಗುತ್ತದೆ ಎಂದರು.
ಸೈನಿಕರ ಸಹಾಯಾರ್ಥ ನಿಧಿಗೆ ನೀಡಲಾದ ಮೊತ್ತದ ಕುರಿತು ಮಾತನಾಡಿದ ಅವರು, ಕೊಡುವ ಮನಸ್ಸು ಮುಖ್ಯವೇ ಹೊರತು ಎಷ್ಟು ಕೊಟ್ಟರೆಂಬುದು ನಗಣ್ಯವಾಗುತ್ತದೆ ಎಂದರು. ಇದಕ್ಕಾಗಿ ಜಿಎಸ್ ಬಿ ಹಿತರಕ್ಷಣಾ ವೇದಿಕೆ ಆರಂಭಿಸಿದ ಅಭಿಯಾನವನ್ನು ಅವರು ಶ್ಲಾಘಿಸಿದರು.

ನಾಗಾಲ್ಯಾಂಡ್ನ ರಾಜ್ಯಪಾಲ ಪಿ.ಬಿ. ಆಚಾರ್ಯ ಮಾತನಾಡಿ, ಜ್ಞಾನದಿಂದ ಮನುಷ್ಯನ ಸಬಲೀಕರಣವಾಗುತ್ತದೆ. ಸಮಗ್ರ ಶಿಕ್ಷಣದಿಂದ ಜ್ಞಾನಪ್ರಾಪ್ತಿಯಾಗುತ್ತದೆ. ಸಾರಸ್ವತ ಸಮಾಜ ವಿಶಾಲ ಹೃದಯವನ್ನು ಹೊಂದಿದೆ.
ಸಮಾಜದ ಆಧಾರ ಸ್ತಂಭಗಳನ್ನು ಗಟ್ಟಿಗೊಳಿಸಬೇಕಿದೆ, ಆಗ ಇದೊಂದು ಬಲಿಷ್ಟ ಕಟ್ಟಡವಾಗಿ ಹೊರಹೊಮ್ಮಲಿದೆ ಎಂದರು. ಸಾರಸ್ವತ ಮಾಜ ಸರಸ್ವತಿಯ ಜ್ಞಾನ ಹಾಗೂ ಲಕ್ಷ್ಮೀಯ ಸಂಪತ್ತು ಮಿಶ್ರಿತ ಸಮಾಜ. ಈ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅತ್ಯುನ್ನತ ಸ್ಥಾನ ಪಡೆದ ಸಾಧನೆ ಮಾಡಿದವರಿದ್ದಾರೆ. ನಾವು ಸರಿಯಾದ ಶಿಕ್ಷಣದ ಮೂಲಕ ಇದೇ ಹಾದಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಮಾಜದ ಮುಂದಾಳುಗಳಾದ ಗೋವಾದ ಶಾಸಕ ಸಿದ್ಧಾರ್ಥ ಕುಂಕೋಳಿಕರ್, ಇನ್ಫೋಸಿಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಯು. ರಾಮದಾಸ ಕಾಮತ್, ಉದ್ಯಮಿಗಳಾದ ಕೆ.ಉಲ್ಲಾಸ್ ಕಾಮತ್, ಅನಂತ ಪೈ,ಜಗನ್ನಾಥ ಶೆಣೈ,ಗೌತಮ್ ಪೈ, ಬಿ.ಸುಬ್ರಾಯ ಬಾಳಿಗಾ, ರಘುನಂದನ ಕಾಮತ್, ಮಂಗಳೂರು ವಿಶ್ವ ಜಿಎಸ್ ಬಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಪ್ರದೀಪ್ ಪೈ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications