ಸಚಿವ ಪ್ರಮೋದ್ ಮಧ್ವರಾಜ್ ಮೇಲೆ ತನಿಖೆಗೆ ಆಗ್ರಹಿಸಿ ಆರ್ಬಿಐಗೆ ಪತ್ರ
ಉಡುಪಿ, ಮಾರ್ಚ್ 15: ರಾಜ್ಯ ಸರ್ಕಾರದ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ನಿಯಮಬಾಹಿರವಾಗಿ ಬ್ಯಾಂಕ್ನಿಂದ ಭಾರಿ ಮೊತ್ತದ ಸಾಲ ಪಡೆದಿದ್ದಾರೆ ಹಾಗಾಗಿ ಅವರ ವಿರುದ್ಧ ತನಿಖೆ ಮಾಡಬೇಕು ಎಂದು ಆಗ್ರಹಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಆರ್ಬಿಐ ಗೆ ಪತ್ರ ಬರೆಯಲಾಗಿದೆ.
ಕಾಂಗ್ರೆಸ್ ಶಾಸಕ ಹಾಗೂ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಡಿಮೆ ಮೌಲ್ಯದ ಆಸ್ತಿಯನ್ನು ಬ್ಯಾಂಕ್ಗೆ ನೀಡಿ ತಮ್ಮ ಪ್ರಭಾವ ಬಳಸಿ ಭಾರಿ ಮೊತ್ತದ ಸಾಲವನ್ನು ಪಡೆದಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದ್ದು, ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಪತ್ರ ಬರೆದಿದ್ದಾರೆ.
ಹೊಗಳಿ ಹೊಗಳಿ ಚುನಾವಣೆಗೆ ನಿಲ್ಲುವುದು ಶೀರೂರು ಸ್ವಾಮೀಜಿ ತಂತ್ರವೆ?
ಮಧ್ವರಾಜ್ ಅವರು ತಮ್ಮ ಉಡುಪಿ ಜಿಲ್ಲೆಯ ಬ್ರಹ್ಮಾವರ ಹೋಬಳಿ ವ್ಯಾಪ್ತಿಯ ಉಪ್ಪೂರು ಗ್ರಾಮದಲ್ಲಿನ ತಮ್ಮ 1.10 ಕೋಟಿ ರೂಪಾಯಿ ಮೌಲ್ಯದ 3.08 ಎಕರೆ ಜಮೀನನ್ನು ಅಡ ಇಟ್ಟು ಉಡುಪಿ ಬ್ಯಾಂಕಿನಲ್ಲಿ ಅಡವಿರಿಸಿ 190 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದು ಅಬ್ರಹಾಂ ಆರೋಪಿಸಿ ಪತ್ರ ಬರೆದಿದ್ದಾರೆ. ಪತ್ರದ ಜೊತೆಗೆ ಸಂಬಂಧಪಟ್ಟ ದಾಖಲೆಗಳನ್ನೂ ಹಣಕಾಸು ಸಚಿವಾಲಯ ಹಾಗೂ ಆರ್ಬಿಐಗೆ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮಧ್ವರಾಜ್ ಅವರು 'ಈ ರೀತಿಯ ಆರೋಪ ಮಾಡುವವರಿಗೆ ಹುಚ್ಚು ಹಿಡಿದಿದೆ, ನಮ್ಮ ತಂದೆಯವರ ಕಾಲದಿಂದಲೂ ಸಿಂಡಿಕೇಟ್ ಬ್ಯಾಂಕ್ನಲ್ಲಿ ನಮ್ಮ ವ್ಯವಹಾರ ಇದೆ, ಸಾಲ ಪಡೆಯುವಾಗ ಎಷ್ಟು ಅವಶ್ಯಕತೆ ಇದೆಯೋ ಅಷ್ಟೆ ಮೌಲ್ಯದ ಜಮೀನನ್ನು ಅಡವಿಟ್ಟಿದ್ದೇನೆ' ಎಂದು ಅವರು ಹೇಳಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಎಷ್ಟು ಮೌಲ್ಯದ ಆಸ್ತಿ ಅಡವಿಟ್ಟಿದ್ದಾರೆ ಹಾಗೂ ಎಷ್ಟು ಸಾಳ ಪಡೆಯಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದ ಅವರು 'ಲೋಕಾಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ನನ್ನ ಆಸ್ತಿ, ಸಾಲ, ವ್ಯವಹಾರಗಳ ಮಾಹಿತಿ ನೀಡಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.