"ಯಡಿಯೂರಪ್ಪ ಈ ವಯಸ್ಸಿನಲ್ಲಿ ಓಡಾಟ ಮಾಡಿದ ಫಲ ಇದು"; ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಡಿಸೆಂಬರ್ 9: "ಉಪಚುನಾವಣೆ ಗೆಲುವು ಹರ್ಷ ತಂದಿದೆ. ಇದು ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಿನ ಚುನಾವಣೆ ಆಗಿತ್ತು. ಅಸ್ಥಿರ ವ್ಯವಸ್ಥೆ ಹೋಗಿ ಸ್ಥಿರ ಸರಕಾರ ಬಂದಿದೆ. ಮೂರೂವರೆ ವರ್ಷ ಪರಿಣಾಮಕಾರಿ ಆಡಳಿತ ಕೊಡುತ್ತೇವೆ" ಎಂದು ಭರವಸೆ ನೀಡಿದ್ದಾರೆ ಕೋಟ ಶ್ರೀನಿವಾಸ ಪೂಜಾರಿ.
ಉಡುಪಿಯಲ್ಲಿ ಮಾತನಾಡಿದ ಅವರು, "ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ. ಜನರ ತೀರ್ಮಾನವನ್ನು ಗೌರವದಿಂದ ಸ್ವೀಕರಿಸಿದ್ದೇವೆ. ಮುಂದೆ ಏನು ಅನ್ನೋದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಬಿಜೆಪಿಗೆ ಬೆಂಬಲಿಸುವುದಾಗಿ ಶರತ್ ಬಚ್ಚೇಗೌಡ ಹೇಳಿದ್ದರು. ಈ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷರು ತೀರ್ಮಾನಿಸುತ್ತಾರೆ" ಎಂದು ಹೇಳಿದರು.
"ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ. ಕಣ್ಣೀರು ಹಾಕಿದರೆ ಕೇಕೆ ಹಾಕಿದರೆ ಗೆಲುವು ಸಿಗಲ್ಲ. ಯಡಿಯೂರಪ್ಪ ಈ ವಯಸ್ಸಿನಲ್ಲಿ ಓಡಾಟ ಮಾಡಿದ ಫಲ ಇದು. ಬಿಜೆಪಿ ಮತ್ತು ಬಿಎಸ್ ವೈ ಟೀಕಿಸುವವರು ಇನ್ನಾದರೂ ನಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಕುಟುಕಿದರು.

ಬಿಜೆಪಿ ಮಂತ್ರಿಮಂಡಲದ ವಿಸ್ತರಣೆ ವಿಚಾರವಾಗಿಯೂ ಮಾತನಾಡಿದ ಅವರು, "ಸಾಕಷ್ಟು ಸಚಿವ ಸ್ಥಾನಗಳು ಖಾಲಿಯಿವೆ. ಮುಖ್ಯಮಂತ್ರಿಗಳ ಬಳಿ ಹಲವು ಖಾತೆಗಳಿವೆ. ಗೆದ್ದು ಬಂದವರಿಗೆ ಅವಕಾಶ ಕೊಡಲು ಸಿಎಂ ಖಾತೆ ಉಳಿಸಿಕೊಂಡಿದ್ದಾರೆ. ಸೂಕ್ಷ್ಮವಾಗಿ, ಪಕ್ಷವನ್ನು ಗಮನದಲ್ಲಿಟ್ಟುಕೊಂಡು ಖಾತೆ ಹಂಚಿಕೆ ಮಾಡುತ್ತಾರೆ. ಇಡೀ ಪಕ್ಷವನ್ನು ಒಟ್ಟಾಗಿ ಒಂದಾಗಿ ತೆಗೆದುಕೊಂಡು ಹೋಗುವ ಸಚಿವರ ತಂಡ ರಚನೆಯಾಗುತ್ತದೆ, ನಾವೆಲ್ಲರೂ ರಾಜ್ಯಾಧ್ಯಕ್ಷರು, ಸಿಎಂ , ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರಬೇಕು" ಎಂದರು.












Click it and Unblock the Notifications