ಕೋಟ ಡಬಲ್ ಮರ್ಡರ್: ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿ ಜೈಲುಪಾಲು
ಉಡುಪಿ, ಫೆಬ್ರವರಿ 11:ಉಡುಪಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಕೋಟ ಡಬಲ್ ಮರ್ಡರ್ ಪ್ರಕರಣದಲ್ಲಿ ಪೋಲಿಸರೇ ಬಂಧನಕ್ಕೆ ಒಳಗಾದ ಘಟನೆ ನಡೆದಿದೆ. ಜನವರಿ 26ರ ತಡ ರಾತ್ರಿ ನಡೆದ ಡಬಲ್ ಮರ್ಡರ್ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಈಗ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ ಆಗಿದೆ. ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಎಂಬುವವರನ್ನು ಬಂಧಿಸಲಾಗಿದೆ . ಬಂಧಿತ ಪೊಲೀಸ್ ಸಿಬ್ಬಂದಿಗಳಿಬ್ಬರೂ ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದ ಮೇರೆಗೆ ಬಂಧಿಸಲಾಗಿದೆ.
ಕೋಟ ಡಬಲ್ ಮರ್ಡರ್:ಉಡುಪಿ ಜಿ.ಪಂ.ಸದಸ್ಯ ಸೂತ್ರಧಾರಿ, ಬಂಧಿತರ ಸಂಖ್ಯೆ 6ಕ್ಕೆ ಏರಿಕೆ
ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಕೋಟ ಠಾಣೆ ವ್ಯಾಪ್ತಿಯ ರೌಡಿಗಳಾದ ಹರೀಶ್ ರೆಡ್ದಿ, ರಾಜಶೇಖರ ರೆಡ್ಡಿ ಮತ್ತು ಅವರ ಸಹಚರರೊಂದಿಗೆ ಒಡನಾಟ ಹೊಂದಿದ್ದರು ಎಂದು ಆರೋಪಿಸಲಾಗಿದೆ, ಅಲ್ಲದೇ ಘಟನೆ ನಡೆದ ರಾತ್ರಿ ಕೃತ್ಯ ಎಸಗಿದ ಆರೋಪಿಗಳು ಅವಿತುಕೊಳ್ಳಲು ಪವನ್ ಅಮಿನ್ ಹೆಬ್ರಿಯ ಕುಚ್ಚೂರು ಎಂಬಲ್ಲಿ ತನ್ನ ಮನೆಯಲ್ಲಿ ಅವಕಾಶ ಕಲ್ಪಿಸಿದ್ದ. ಮುಂದೇನಾಯ್ತು ಓದಿ...
ಪವನ್ ಅಮಿನ್ಗೆ ದೂರವಾಣಿ ಕರೆ
ಮರುದಿನ ಬೆಳಗ್ಗೆ ಹರೀಶ್ ರೆಡ್ಡಿಯು ಪವನ್ ಅಮಿನ್ಗೆ ದೂರವಾಣಿ ಕರೆ ಮಾಡಿ ಮೊಬೈಲ್ ಫೋನ್ ಮತ್ತು ಸಿಮ್ ಸಹಿತ ಕೆಲವು ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಕೇಳಿದ್ದ. ಅದರಂತೆ ಅವುಗಳನ್ನು ಪ್ರಣವ್ ಭಟ್ ಎಂಬಾತನ ಮೂಲಕ ಪವನ್ ಅಮಿನ್ ಕಳುಹಿಸಿಕೊಟ್ಟಿದ್ದ ಎಂದು ಹೇಳಲಾಗಿದೆ.
ಕೋಟ ಡಬಲ್ ಮರ್ಡರ್:ಪ್ರಮುಖ ಆರೋಪಿಗಳಿಬ್ಬರ ಬಂಧನ
ಸಂಬಂಧಿಕರ ಮನೆಯಲ್ಲಿ ವ್ಯವಸ್ಥೆ
ಕೊಲೆ ನಡೆದ ಜನವರಿ 26ರ ತಡರಾತ್ರಿ ಬಂಧಿತ ಪೊಲೀಸ್ ಸಿಬ್ಬಂದಿಗಳಾದ ಪವನ್ ಅಮಿನ್, ವೀರೇಂದ್ರ ಆಚಾರ್ಯನೊಂದಿಗೆ ಸೇರಿ ಕೊಲೆ ಆರೋಪಿಗಳಿಗೆ ಕಾರಿನ ವ್ಯವಸ್ಥೆ ಮಾಡಿ ಆರೋಪಿಗಳನ್ನು ಆಗುಂಬೆಯ ಎನ್.ಆರ್.ಪುರದ ಮಲ್ಲಂದೂರಿನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ನ್ಯಾಯಾಂಗ ಬಂಧನಕ್ಕೆ
ಪವನ್ ಮತ್ತು ವೀರೇಂದ್ರ ಆಚಾರ್ಯರನ್ನು ಬಂಧಿಸಿ ಅವರಿಂದ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಫೋನ್ ಸಹಿತ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 15ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬರ್ಬರವಾಗಿ ಕೊಲೆ
ವಿವಾದಕ್ಕೆ ಸಂಬಂಧಿಸಿದಂತೆ ಭರತ್ ಕುಮಾರ್ ಮತ್ತು ಯತೀಶ್ ಎಂಬುವವರನ್ನು ಜನವರಿ 26 ರ ತಡರಾತ್ರಿ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ರೌಡಿಶೀಟರ್ ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿಯನ್ನು ಬಂಧಿಸಿದ್ದಾರೆ.