ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ : ಹಾಲಾಡಿ ಶ್ರೀನಿವಾಸ ಶೆಟ್ಟಿ
ಉಡುಪಿ, ನವೆಂಬರ್ 12: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಮ್ಮ ಪಕ್ಷ ಸೇರ್ಪಡೆಯ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಕಳೆದ ಹಲವಾರು ದಿನಗಳಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನಿಗೂಢ ನಡೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿತ್ತು .
ಒಂದೆಡೆ ಕಾಂಗ್ರೆಸ್ ಹಿರಿಯ ಮುಖಂಡರು, ಇನ್ನೊಂದೆಡೆ ಬಿಜೆಪಿ ನಾಯಕರು, ಮತ್ತೊಂದೆಡೆ ಜೆಡಿಎಸ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದವು. ಈಗ ಹಾಲಾಡಿ ಶ್ರೀನಿವಾಸ ಶೆಟ್ಟಿ ತಮ್ಮ ಕುರಿತಾಗಿದ್ದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದು ಮುಂಬರುವ ದಿನಗಳಲ್ಲಿ ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ.

ಕುಂದಾಪುರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಯಿಂದ ನನಗೆ ಆಹ್ವಾನ ಇದೆ. ಪಕ್ಷ ಸೇರ್ಪಡೆಗಿರುವ ತಾಂತ್ರಿಕ ಸಮಸ್ಯೆ ಕಳೆದ ಕೂಡಲೇ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದ್ದಾರೆ.
"ಸದ್ಯ ನಾನು ಪಕ್ಷೇತರ ಶಾಸಕನಾಗಿಯೇ ಇದ್ದೇನೆ. ಆಸೆ- ಆಮಿಷಗಳಿಗೆ ಒಳಗಾಗಿ ಬಿಜೆಪಿ ಸೇರುತ್ತಿಲ್ಲ," ಎಂದು ಹೇಳಿದ ಅವರು, "ಈಗ ಏಕಾಏಕಿ ಪಕ್ಷ ಸೇರ್ಪಡೆಯಾದರೆ ನನ್ನ ಶಾಸಕತ್ವ ಅನರ್ಹ ಆಗುತ್ತದೆ," ಎಂದು ಅಭಿಪ್ರಾಯ ಪಟ್ಟರು.
"ನಾನು ಯಾವುದೇ ಬೇಡಿಕೆ ಇಟ್ಟು ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ. ನೀತಿ ಸಂಹಿತೆ ಬಂದಾಗ ನಾನು ಪಕ್ಷ ಸೇರುತ್ತೇನೆ. ಜನರ ಅಭಿಪ್ರಾಯ ಪಡೆದೇ ಈ ನಿರ್ಧಾರಕ್ಕೆ ಬಂದಿದ್ದೇನೆ," ಎಂದು ಹೇಳಿದ ಅವರು "ಉಡುಪಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಸಾಮಾನ್ಯನಾಗಿ ಭಾಗವಹಿಸುತ್ತೇನೆ," ಎಂದು ಹೇಳಿದರು.
ನಾನು ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಪಕ್ಷಕ್ಕೆ ಸೇರುವುದಿಲ್ಲ ಎಂದು ಹೇಳಿದ ಅವರು ಪರಿವರ್ತನಾ ಯಾತ್ರೆಯ ವೇದಿಕೆ ಹತ್ತಲ್ಲ, ಆದರೆ ಯಾತ್ರೆಯಲ್ಲಿ ಸಾಮಾನ್ಯನಾಗಿ ಭಾಗವಹಿಸುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.












Click it and Unblock the Notifications