ನಾನು ಬೃಹಸ್ಪತಿಯಲ್ಲ ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದೇಕೆ?
ಉಡುಪಿ, ಜುಲೈ 26: ಲಿಂಗಾಯತರ ಧರ್ಮದ ವಿಚಾರ ನನಗೆ ಗೊತ್ತೇ ಇಲ್ಲ. ನಾನು ಲಿಂಗಾಯತ ಅಲ್ಲ. ನನಗಿರುವುದು ಸೀಮಿತ ಜ್ಞಾನ. ನಾನು ಎಲ್ಲಾ ತಿಳಿದ ಬೃಹಸ್ಪತಿಯಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯಲ್ಲಿ ಮಾತನಾಡಿದ್ದಾರೆ.
ಇಲ್ಲಿನ ಗ್ರಾಮವೊಂದರಲ್ಲಿ ಕೊರಗ ಸಮುದಾಯದ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ನನ್ನ ಜ್ಞಾನದೊಳಗೆ ಲಿಂಗಾಯತ - ವೀರಶೈವ ವಿಚಾರ ಹೊಕ್ಕಿಲ್ಲ. ಈ ವಿಚಾರ ಸರಕಾರ ನೋಡಿಕೊಳ್ಳುತ್ತದೆ. ಸಮಾಜಕಲ್ಯಾಣ, ಹಿಂದುಳಿದ ವರ್ಗಗಳು- ಕಾನೂನು ಇಲಾಖೆ ಇವ್ಯಾವುದಕ್ಕೂ ಸಚಿವ ಅಲ್ಲ ಎಂದರು.

ವೇಣುಗೋಪಾಲ್ ಉಸ್ತುವಾರಿಯಾಗುವ ಮುಂಚೆಯೂ ಸರಕಾರ ಅಹಿಂದ ವರ್ಗಗಳ ಪರವಾಗಿಯೇ ಇತ್ತು. ರಾಜ್ಯದ ಶೇ 70ರಷ್ಟು ಮಂದಿ ಅಹಿಂದ ವರ್ಗಕ್ಕೆ ಸೇರಿದವರು. ಅಹಿಂದ ಅಂದರೆ ಬಹುಸಂಖ್ಯಾತರು. ನಾವು ಆ ವರ್ಗದ ಪರವಾಗಿದ್ದರೆ ಏನು ತಪ್ಪು ಎಂದು ಸವಾಲು ಹಾಕಿದರು.
ದೇವರಾಜ್ ಅರಸ್ ಕಾಲದಲ್ಲೇ ಉಳುವವನೇ ಭೂಮಿಗೆ ಒಡೆಯ ಕಾನೂನು ತಂದು ಭೂಮಿ ನೀಡಲಾಗಿದ್ದರೂ ಅದನ್ನು ಅಭಿವೃದ್ಧಿಪಡಿಸಿ ಫಲ ಪಡೆಯುವಲ್ಲಿ ಜಿಲ್ಲೆಯ ಕೊರಗ ಸಮುದಾಯ ಹಿಂದುಳಿದಿದೆ. ಇದೀಗ ಭೂಮಿಯನ್ನು ಫಲಭರಿತ ಪ್ರದೇಶವನ್ನಾಗಿಸಲು ಇಲಾಖೆಗಳೇ ಎಲ್ಲ ಸೌಲಭ್ಯಗಳನ್ನು ವಿತರಿಸುತ್ತಿದೆ. ಅದರ ಪ್ರಯೋಜನ ಪಡೆದು ಸುಂದರ ಬದುಕು ಕಟ್ಟಿಕೊಳ್ಳಿ ಎಂದು ಸಚಿವರು ಸಲಹೆ ಮಾಡಿದರು.
ಸ್ಥಳೀಯ ಕೊರಗ ಸಮುದಾಯದವರ ಅವಶ್ಯಕತೆಗಳನ್ನು ಪಟ್ಟಿ ಮಾಡಿ, ಅವರೇ ನೀಡಿದ ಬೇಡಿಕೆಯಂತೆ ಒಂದು ಕುಟುಂಬಕ್ಕೆ 15 ತೆಂಗು, ಮಲ್ಲಿಗೆ, ಹಲಸು, ಜೀಗುಜ್ಜೆ ಹಾಗೂ ತರಕಾರಿ ಬೀಜಗಳನ್ನು ನೀಡುತ್ತಿದೆ. ನರೇಗಾ ಅಡಿ ಕೃಷಿ ಮಾಡಿ, ಕೂಲಿಯನ್ನೂ ಪಡೆಯಿರಿ ಎಂದು ಸಲಹೆ ಮಾಡಿದರು.
ಜಿ.ಪಂ. ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ತಾ.ಪಂ. ಸದಸ್ಯರಾದ ಸುನೀತಾ ಶೆಟ್ಟಿ, ಭುಜಂಗ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷರಾದ ಆಶಾಲತಾ, ಉಪಾಧ್ಯಕ್ಷರಾದ ದೇವಕಿ ಕೋಟ್ಯಾನ್, ಬೊಗ್ರ ಕೊರಗ, ಸುಶೀಲಾ, ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಭುವನೇಶ್ವರಿ, ಸಹಾಯಕ ನಿರ್ದೇಶಕರಾದ ಸಂಜೀವ ನಾಯಕ್ ಪಾಲ್ಗೊಂಡರು.












Click it and Unblock the Notifications