ಉಡುಪಿ: ಪ್ರೀತಿಸಿ ಮದುವೆಯಾದ ಗರ್ಭಿಣಿ ಪತ್ನಿಗೆ ಸಿಗರೇಟ್ ಚುಚ್ಚಿ, ಹೊಟ್ಟೆಗೆ ಒದ್ದ ಪಾಪಿ ಪತಿ
ಉಡುಪಿ, ಮಾರ್ಚ್ 1: ಗರ್ಭಿಣಿ ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸಿ, ಪತ್ನಿಗೆ ಸಿಗರೇಟ್ನಲ್ಲಿ ಚುಚ್ಚಿ, ಹಿಂಸಿಸಿ ಪತಿ ಕ್ರೌರ್ಯ ಮೆರೆದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಪೂಜಾರಿ ಬಂಧಿತ ಆರೋಪಿಯಾಗಿದ್ದಾನೆ.
ತಾನು ಪ್ರೀತಿಸಿ ವಿವಾಹವಾಗಿದ್ದ ಕುಂದಾಪುರದ ಬೀಜಾಡಿ ನಿವಾಸಿ ಪ್ರಿಯಾಂಕಾ (21)ಗೆ ಸಹಿಸಲು ಅಸಾಧ್ಯವಾದ ರೀತಿ ಹಿಂಸಿಸಿ ಕ್ರೌರ್ಯ ಮೆರೆದಿದ್ದಾನೆ. ಈತ ಗರ್ಭಿಣಿ ಪತ್ನಿಗೆ ಸುಡುತ್ತಿರುವ ಸಿಗರೇಟ್ ಅನ್ನು ಮುಖ, ದೇಹಕ್ಕೆಲ್ಲಾ ತಾಗಿಸಿ ಕ್ರೂರವಾಗಿ ಹಿಂಸಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮಂಗಳೂರು: ಕಳ್ಳತನದ ಆರೋಪಿ ಲಾಕ್ಅಪ್ ಡೆತ್; ಸಂಶಯಾಸ್ಪದ ಸಾವಿನ ಬಗ್ಗೆ ತನಿಖೆಗೆ ಒತ್ತಾಯ
ಆ ವಿಡಿಯೋವನ್ನು ಸ್ವತಃ ಪತಿ ಪ್ರದೀಪನೇ ರೆಕಾರ್ಡ್ ಮಾಡಿ ಪತ್ನಿಯ ಮನೆಯವರಿಗೆ ಹಂಚಿದ್ದ. ತದನಂತರ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಪತ್ನಿ ಪ್ರಿಯಾಂಕಾ ನ್ಯಾಯಯಾಚಿಸಿ ಕುಂದಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ವಿಡಿಯೋ ವೈರಲ್ ಆದ ಹಾಗೂ ಪತ್ನಿ ಠಾಣೆಗೆ ದೂರು ನೀಡಿದ ವಿಚಾರ ತಿಳಿಯುತ್ತಲೇ ಆರೋಪಿ ಪ್ರದೀಪ್ ಪರಾರಿಯಾಗಿದ್ದ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಂದಾಪುರ ಪೊಲೀಸರು ಆರೋಪಿಯನ್ನು ಶೋಧಿಸಿ ಆರೆಸ್ಟ್ ಮಾಡಿದ್ದಾರೆ. ಅಚ್ಚರಿಯ ವಿಷಯವೆಂದರೆ ಪ್ರಿಯಾಂಕಾ ಹಾಗೂ ಪ್ರದೀಪ್ ಅವರದು ಪ್ರೇಮ ವಿವಾಹವಾಗಿತ್ತು. ಇವರಿಬ್ಬರು ಕಳೆದ ವರ್ಷ ಆಕ್ಟೋಬರ್ ತಿಂಗಳಿನಲ್ಲಿ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು. ವಿವಾಹದ 5 ತಿಂಗಳಿನ ಒಳಗಡೆ ತಾನೂ ಪ್ರೀತಿಸುತ್ತಿದ್ದ ಯುವಕನ ರಾಕ್ಷಸಿ ಪ್ರವೃತ್ತಿ ಪತ್ನಿಯ ಎದುರು ಪ್ರಕಟಗೊಂಡಿತ್ತು.
ವಿವಾಹದ ಬಳಿಕ ಪ್ರಿಯಾಂಕಾ ಪತಿ ಮನೆಯಲ್ಲೇ ನೆಲೆಸಿದ್ದರು. ಮದುವೆಯಾಗಿ 4-5 ತಿಂಗಳು ಕಳೆಯುತ್ತಿದ್ದಂತೆಯೇ ಪ್ರದೀಪ್ ತನ್ನ ಪತ್ನಿಯಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು, ದಿನನಿತ್ಯವೂ ತವರು ಮನೆಯಿಂದ ಚಿನ್ನ ಹಾಗೂ ಹಣವನ್ನು ತೆಗೆದುಕೊಂಡು ಬಾ ಎಂದು ಚಿತ್ರಹಿಂಸೆ ನೀಡಲಾರಂಭಿಸಿದ್ದಾನೆ. 2 ಲಕ್ಷ ರೂಪಾಯಿ ಹಣ ಹಾಗೂ 4 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಬೇಕೆಂದು ಪತ್ನಿಗೆ ದಿನಾಲೂ ಪೀಡಿಸುತ್ತಿದ್ದ. ಪತ್ನಿ ವರದಕ್ಷಿಣೆ ತರಲು ಒಪ್ಪದಿದ್ದಾಗ ತಾನು ಸೇದುತ್ತಿದ ಸಿಗರೇಟಿನಿಂದ ಆಕೆಯ ಮುಖ ದೇಹಕ್ಕೆಲ್ಲಾ ಸುಟ್ಟಿದ್ದಾನೆ. ಅದು ಕೂಡ ತನ್ನ ತಾಯಿಯ ಎದುರಲ್ಲೆ ಹಿಂಸೆ ಮೆರೆದಿದ್ದಾನೆ.
ಸಿಗರೇಟ್ನಲ್ಲಿ ಚುಚ್ಚಿದ ವೇಳೆ ತಾಯಿ ಮಧ್ಯಪ್ರವೇಶಿಸಿ ಹಿಂಸೆ ಮಾಡದಂತೆ ಮನವಿ ಮಾಡಿದ್ದಾರೆ. ಗರ್ಭಿಣಿ ಪತ್ನಿಯನ್ನು ಹಿಂಸೆ ಮಾಡಿದರೆ ಪಾಪ ತಟ್ಟುವುದಾಗಿ ಹೇಳಿದ್ದಾರೆ. ಆದರೆ ಇದು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಪಾಪಿ ಪತಿ ಪ್ರದೀಪ್ ಸಿಗರೇಟ್ನಲ್ಲಿ ಚುಚ್ಚಿ ಕಾಲು ಹಿಡಿಯುವಂತೆ ನಿರ್ದಯವಾಗಿ ನಡೆದುಕೊಂಡಿದ್ದಾನೆ.
ಪತ್ನಿ ಪ್ರೀಯಾಂಕಾಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಸ್ವಂತ ಮಗುವನ್ನೇ ಹತ್ಯೆ ಮಾಡುವುದಕ್ಕೆ ಪ್ರದೀಪ್ ಪ್ರಯತ್ನಿಸಿದ್ದಾನೆ. ಪ್ರೀಯಾಂಕಾಳ ಹೊಟ್ಟೆಗೆ ಒದ್ದು ಮಗವನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾನೆ. ಆದರೆ ಈ ವೇಳೆ ಕಾಲು ಏಟು ಪ್ರೀಯಾಂಕಾ ಸೊಂಟಕ್ಕೆ ಬಿದ್ದಿದ್ದು, ಸದ್ಯ ಮಗು ಅಪಾಯದಿಂದ ಪಾರಾಗಿದೆ ಎಂದು ಪ್ರಿಯಾಂಕಾ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪತ್ನಿಗೆ ಹಿಂಸೆ ನೀಡುತ್ತಿರುವ ವಿಡಿಯೋವನ್ನು ಸ್ವತಃ ಆರೋಪಿ ಪ್ರದೀಪ್ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಆ ವಿಡಿಯೋವನ್ನು ಪ್ರಿಯಾಂಕಾ ಮನೆಯವರಿಗೆ ಕಳುಹಿಸಿ ವರದಕ್ಷಿಣೆಗಾಗಿ ಒತ್ತಾಯ ಮಾಡಿದ್ದ. ಪಾಪಿ ಪತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಪತಿ ಪ್ರದೀಪ್ನನ್ನು ಹೆಡೆಮುರಿ ಕಟ್ಟಿದ್ದಾರೆ.