ಉಡುಪಿಯಲ್ಲಿ ಹಿಜಾಬ್ ವಿವಾದ; ಕಾಲೇಜು ವಿರುದ್ಧ ಪ್ರತಿಭಟನೆಗಿಳಿದ ವಿದ್ಯಾರ್ಥಿನಿಯರು
ಉಡುಪಿ, ಜನವರಿ 20: ಉಡುಪಿಯ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಆರಂಭವಾಗಿ ಮೂರು ವಾರವಾದರೂ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ವಿದ್ಯಾರ್ಥಿನಿಯರು ಮತ್ತು ಕಾಲೇಜು ನಡುವೆ ಹಠ- ಬಿಕ್ಕಟ್ಟು ಜೋರಾಗುತ್ತಿದೆ.
ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ನಮ್ಮ ಹಕ್ಕು ಅಂದ್ರೆ, ಕಾಲೇಜು ಆಡಳಿತ ಮಂಡಳಿ ಹಿಜಾಬ್ ಧರಿಸಿ ಪಾಠ ಕೇಳುವ ನಿಯಮ ನಮ್ಮಲಿಲ್ಲ ಎನ್ನುತ್ತಿವೆ. ಈ ನಡುವೆ ಪಿಯು ಬೋರ್ಡ್ ಈ ಕುರಿತು ಯಾವ ತೀರ್ಮಾನವನ್ನೂ ನೀಡಿಲ್ಲ. ಹೀಗಾಗಿ ಕಾಲೇಜು ಪ್ರಾಂಶುಪಾಲರು ಸಮವಸ್ತ್ರ ನಿಯಮ ಪಾಲಿಸದೇ ತರಗತಿ ಪ್ರವೇಶ ಮಾಡುವುದಕ್ಕೆ ಅವಕಾಶ ಇಲ್ಲ ಅಂತಾ ಹೇಳಿದ್ದಾರೆ. ಹೀಗಾಗಿ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದರೂ ಕ್ಲಾಸ್ಗೆ ತೆರಳಲು ಅವಕಾಶಗಳಿಲ್ಲ.
ಕಳೆದ ಮೂರ ವಾರಗಳ ಹಿಂದೆ ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ವಿದ್ಯಾರ್ಥಿನಿಯರು, ನಮಗೆ ಧರ್ಮದ ಕಟ್ಟುಪಾಡುಗಳೇ ಮುಖ್ಯ, ಇದು ನಮ್ಮ ಹಕ್ಕು ಅಂತ ಹಠಕ್ಕೆ ಬಿದ್ದಿದ್ದು, ಪರೋಕ್ಷವಾಗಿ ಕೆಲ ಸಂಘಟನೆಗಳು ಸಾಥ್ ನೀಡುತ್ತಿವೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಇನ್ನಷ್ಟು ಬಿಗಡಾಯಿಸುತ್ತಿದೆ. ಸರ್ವಧರ್ಮದ ಕಾಲೇಜಿನ ಅಂಗಳವು ಧರ್ಮದ ಅಮಲಿನಲ್ಲಿ, ಧರ್ಮ ಸಂಘರ್ಷದ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.

ಕಳೆದ ಮೂವತ್ತೇಳು ವರ್ಷಗಳಿಂದ ಉಡುಪಿಯ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಸರ್ವಧರ್ಮದ ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಮಾತ್ರ ಧರಿಸಿ ತರಗತಿಗೆ ಹಾಜರಾಗುತ್ತಿದ್ದರು. ಹಿಜಾಬ್ ಧರಿಸಿ ಬಂದವರು, ತರಗತಿ ಪ್ರವೇಶಿಸುವಾಗ ಅದನ್ನು ತೆಗೆದಿರಿಸಿ ಪಾಠ ಕೇಳುತ್ತಿದ್ದರು. ನೂರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಇಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಹಿಜಾಬ್ ವಿವಾದ ಅಂತ ಆದದ್ದು ಇದೇ ಮೊದಲು.
ಕೆಲ ಸಂಘಟನೆಗಳ ಬೆಂಬಲದೊಂದಿಗೆ ವಿದ್ಯಾರ್ಥಿನಿಯರು ಈ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಹಿಜಾಬ್ ಧರಿಸುವುದು ನಮ್ಮ ಹಕ್ಕು, ನಮ್ಮ ಧರ್ಮ. ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳುವ ಅವಕಾಶ ಕೊಡಿ, ಮಹಿಳಾ ಕಾಲೇಜು ಆದರೂ ಪುರುಷ ಪ್ರಾಧ್ಯಾಪಕರು ಇದ್ದಾರೆ, ಕಾರ್ಯಕ್ರಮ ನಡೆಯುವ ವೇಳೆ ಹಲವಾರು ಪುರುಷ ಅತಿಥಿಗಳು ಕಾಲೇಜಿಗೆ ಬರುತ್ತಾರೆ ನಮಗೆ ಹಿಜಾಬ್ ಕೂಡ ಮುಖ್ಯ, ಶಿಕ್ಷಣ ಕೂಡ ಅಷ್ಟೇ ಮುಖ್ಯ ಎಂದು ಪ್ರತಿಭಟನಾನಿರತ ಮುಸ್ಲಿಂ ವಿದ್ಯಾರ್ಥಿನಿಯರು ಹಠಕ್ಕೆ ಬಿದ್ದಿದ್ದಾರೆ.

ಕಾಲೇಜಿಗೆ ಬಂದು ಕ್ಲಾಸ್ ರೂಮ್ ಹೊರಗೆ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ಹಿಜಾಬ್ ಧರಿಸುವುದು ನಮ್ಮ ಧಾರ್ಮಿಕ ಸ್ವಾತಂತ್ರ್ಯ ಅಂತಾ ಕೈಯಲ್ಲಿ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಇನ್ನು ಕಾಲೇಜು ಆಡಳಿತ ಮಂಡಳಿ ಈ ಕುರಿತು ಸಭೆ ನಡೆಸಿ, ಕ್ಲಾಸ್ನಲ್ಲಿ ಹಿಜಾಬ್ ಧರಿಸಿ ಪಾಠ ಕೇಳುವುದಕ್ಕೆ ಅವಕಾಶ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದೆ. ಬೇಕಾದರೆ ಟಿಸಿ ಕೊಡುತ್ತೇವೆ. ಬೇರೆ ಕಾಲೇಜಿಗೆ ಹೋಗಿ ಸೇರಬಹುದು ಅಂದಿದೆ. ಈ ಕುರಿತು ಕಾಲೇಜು ಪ್ರಾಂಶುಪಾಲರು ಪಿಯು ಬೋರ್ಡ್ಗೆ ಪತ್ರ ಬರೆದಿದ್ದು, ಪಿಯು ಬೋರ್ಡ್ನ ಅಂತಿಮ ತೀರ್ಮಾನದ ನಿರೀಕ್ಷೆಯಲ್ಲಿದ್ದಾರೆ.

ಒಟ್ಟಿನಲ್ಲಿ ಸರ್ವ ಧರ್ಮಗಳ ನೆಲೆಬೀಡು, ಜ್ಞಾನ ದೇಗುಲಗಳು ಈ ರೀತಿ ಧಾರ್ಮಿಕ ವಿಚಾರದ ಸಂಘರ್ಷದಲ್ಲಿ ಸುದ್ದಿಯಾಗುತ್ತಿರುವುದು ವಿಪರ್ಯಾಸ. ಕಾಲೇಜು ಮುಂಭಾಗ ದಿನ ನಿತ್ಯ ಪೊಲೀಸ್ ಪಹರೆ, ಉಳಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಡಕು ಉಂಟಾಗಿದೆ. ಹೀಗಾಗಿ ಪಿಯು ಬೋರ್ಡ್ ಆದಷ್ಟು ಬೇಗ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕಾಗಿದೆ.












Click it and Unblock the Notifications