ನೀಚಾಲು : ಬಾವಿಯಿದ್ದರೂ ಕುಡಿಯುವ ನೀರಿಗೆ ಸಂಚಕಾರ
ಉಡುಪಿ, ಜುಲೈ 01 : ಖಾಸಗಿ ಸ್ಥಳದ ಮಾಲಿಕರು ತಮ್ಮ ಜಾಗವನ್ನು ಸಮತಟ್ಟು ಮಾಡಿದ ಪರಿಣಾಮ ಎತ್ತರ ಪ್ರದೇಶದಿಂದ ಮಣ್ಣು ಮಳೆ ನೀರಿನೊಂದಿಗೆ ಬೆರೆತು ತಗ್ಗು ಪ್ರದೇಶಕ್ಕೆ ಹರಿದು, ನಾಲ್ಕೈದು ಮನೆಗಳ ಜಾಗ ಸಹಿತ ಬಾವಿಗಳು ಮುಳುಗಡೆಗೊಂಡ ಪರಿಣಾಮ ಜನ ಕುಡಿಯುವ ನೀರಿಗೂ ಸಂಕಟ ಅನುಭವಿಸುವಂತಾಗಿದೆ.
ಉಡುಪಿ ತಾಲೂಕಿನ ಮುದರಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೀಚಾಲು ಎಂಬಲ್ಲಿ ಖಾಸಗಿ ಜಮೀನಿನಿಂದಾಗಿ ಈ ಭಾಗದ ಜನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಎತ್ತರ ಪ್ರದೇಶದಲ್ಲಿನ ಜಾಗವನ್ನು ಸಮತಟ್ಟು ಮಾಡಿರುವ ಪರಿಣಾಮ ಅಲ್ಲಿನ ಕೆಸರು ಮಣ್ಣು ಸಹಿತ ಮಳೆಯ ನೀರು ನೇರವಾಗಿ ತಗ್ಗು ಪ್ರದೇಶ ಮನೆಯ ಬಾವಿ ಹಾಗೂ ತೋಟವನ್ನು ಸೇರುತ್ತಿದೆ. ಇದರಿಂದಾಗಿ ನೀಚಾಲು ಭಾಗದ ರೆಜಿನಾ ಡಿಸೋಜಾ, ಪೌಲ್ ಡಿಸೋಜಾ, ಲಿಲ್ಲಿ ಡಿಸೋಜಾ ಹಾಗೂ ಲೂಸಿ ಡಿಸೋಜಾ ಎಂಬವರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಗೆ ಮೇಲಿನ ಜಾಗದ ಮಣ್ಣು ಸಹಿತ ಮಳೆಯ ನೀರು ಅಡಿಕೆ ಹಾಗೂ ತೆಂಗಿನ ತೋಟ ಜೊತೆಗೆ ಬಾವಿಯನ್ನು ಸೇರಿದೆ. ಮನೆಯ ಮುಂದೆ ಇದ್ದ ಬಾವಿಗಳು ಕೃತಕ ನೆರೆಯಿಂದ ಮುಚ್ಚಿ ಹೋಗಿವೆ. ಇಲ್ಲಿನ ಸುಮಾರು ಮೂರು ಮನೆಗಳ ಬಾವಿಗಳು ಹಾಗೂ ಪಂಪ್ ಅಳವಡಿಸಿದ ಶೆಡ್ಡಿಗೂ ಹಾನಿಯಾಗಿದೆ. ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ಸಮಸ್ಯೆಗೆ ಮುಕ್ತಿ ದೊರಕಿಸಿ ಕೊಡುವ ಭರವಸೆ ನೀಡಿದರು.

ಇದ್ದ ಬಾವಿಯ ನೀರಿಗೆ ಕೃತಕ ಕೆರೆ ನೀರು ಸೇರಿದ ಪರಿಣಾಮ ನೀರು ಕುಡಿಯಲು ಅಯೋಗ್ಯವಾಗಿದೆ. ಮನೆಯಲ್ಲಿ ಬಾವಿ ಇದ್ದರೂ ಇದೀಗ ಈ ಭಾಗದ ನಾಲ್ಕೈದು ಮನೆಯವರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎನ್ನುವುದು ಸ್ಥಳಿಯ ನಿವಾಸಿಗಳ ಅಳಲು.












Click it and Unblock the Notifications