ಸಂಕಷ್ಟಗಳ ಪ್ರವಾಹದಲ್ಲಿ ತೇಲುತಿಹುದು ಉಡುಪಿ ಜಿಲ್ಲೆ
ಉಡುಪಿ,ಆ.2: ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಗುರುವಾರ ರಾತ್ರಿಯಿಂದ ಆರಂಭಗೊಂಡ ಮಳೆ ಶನಿವಾರವೂ ಮುಂದುವರಿದಿದ್ದು ಜಿಲ್ಲೆಯ ಮೂರೂ ತಾಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ ಕೊಲ್ಲೂರಿನಲ್ಲಿ ಅತ್ಯಧಿಕ 21 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಸಿದ್ದಾಪುರ,13; ಕುಂದಾಪುರ, ಕೋಟಾ 9; ಉಡುಪಿಯಲ್ಲಿ 7 ಸೆಂ.ಮೀ ಮಳೆಯಾಗಿದೆ.
ಭಾರೀ ಗಾಳಿ, ಮಳೆಯ ಪರಿಣಾಮ ಮಲ್ಪೆ ಬಂದರಿನಿಂದ ನಾಡದೋಣಿಗಳು ಶನಿವಾರದಂದು ಮೀನುಗಾರಿಕೆಗೆ ತೆರಳದೆ ಲಂಗರು ಹಾಕಿವೆ. ಕಡಲು ಪ್ರಕ್ಷುಬ್ಧಗೊಂಡಿದ್ದು ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು ಭೀತಿ ಸೃಷ್ಟಿಸಿವೆ.
ಉಕ್ಕಿ ಹರಿಯುತ್ತಿದೆ ಸ್ವರ್ಣಾ, ಸೌಪರ್ಣಿಕ:
ಸ್ವರ್ಣಾ ನದಿ ಕೂಡ ತುಂಬಿ ಹರಿಯುತ್ತಿದ್ದು ಬಜೆ ಪ್ರದೇಶದಲ್ಲಿ ತೋಟಗಳಿಗೆ ನೆರೆ ನೀರು ನುಗ್ಗಿದೆ. ಕೊಲ್ಲೂರು ಭಾಗದಲ್ಲಿ ಸೌಪರ್ಣಿಕ ನದಿ ಉಕ್ಕಿ ಹರಿಯುತ್ತಿದೆ.
ನರೆ ಹಾವಳಿ:
ಉಡುಪಿ ತಾಲೂಕಿನ ಉಪ್ಪೂರು, ಬಾವಲಿಕುದ್ರು, ಬಾರಕೂರು ಮೊದಲಾದ ಪ್ರದೇಶಗಳಲ್ಲಿ ನೆರೆ ಹಾವಳಿ ಉಂಟಾಗಿದೆ.
ಮನೆಗೆ ನೆರೆ:
ಕೋಟೇಶ್ವರ, ಗೋಪಾಡಿ, ಬೀಜಾಡಿ, ಕಾಳಾವರ, ವಕ್ವಾಡಿ, ಹುಣ್ಸೆಮಕ್ಕಿ, ಮೊಳಹಳ್ಳಿ ಮೊದಲಾದ ಪ್ರದೇಶಗಳು ಜಲಾವೃತಗೊಂಡಿವೆ. ಬೀಜಾಡಿ, ಗೋಪಾಡಿಯ ಹಲವು ಮನೆಗಳು ಅಪಾಯದಂಚಿನಲ್ಲಿವೆ.
ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ
ಬಾವಲಿಕುದ್ರು ಮತ್ತು ಸುತ್ತಲಿನ ಪ್ರದೇಶದ ಜನತೆ ಮನೆ ತೊರೆದು ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಬಂದು ತಾತ್ಕಾಲಿಕವಾಗಿ ಬಂಧುಗಳ ಮನೆಗೆ ತೆರಳುತ್ತಿದ್ದಾರೆ.
ಮೂರು ತಾಲೂಕಿನ ಶಾಲೆಗಳಿಗೆ ರಜಾ:
ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಉಡುಪಿ,ಕಾರ್ಕಳ, ಕುಂದಾಪುರ ತಾಲೂಕಿನ ಶಾಲೆಗಳಿಗೆ ಶನಿವಾರ ರಜಾ ಘೋಷಣೆಯಾಗಿದೆ.
ಸಂಚಾರದಲ್ಲಿ ವ್ಯತ್ಯಯ:
ಕಾರ್ಕಳದಲ್ಲಿ ಸೀತಾನದಿ ತುಂಬಿ ಹರಿದ ಪರಿಣಾಮ ಉಡುಪಿ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಹೆಬ್ರಿ ಮತ್ತು ಸೋಮೇಶ್ವರ ನಡುವಿನ ರಸ್ತೆಯಲ್ಲಿ ಸಂಚಾರಕ್ಕೆ ವ್ಯತ್ಯಯವುಂಟಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ:
ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ ಕೊಲ್ಲೂರಿನಲ್ಲಿ ಅತ್ಯಧಿಕ 21 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಸಿದ್ದಾಪುರ,13; ಕುಂದಾಪುರ, ಕೋಟ 9; ಉಡುಪಿಯಲ್ಲಿ 7 ಸೆಂ.ಮೀ ಮಳೆಯಾಗಿದೆ.