ಸರ್ಕಾರ ಉಳಿಸಿಕೊಳ್ಳಲು ದೇವಸ್ಥಾನಗಳ ಸುತ್ತು ಹಾಕಿದ ಎಚ್.ಡಿ.ರೇವಣ್ಣ
ಉಡುಪಿ, ಜುಲೈ 14: ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರು ಸಂಧಾನಗಳನ್ನು ಮಾಡುತ್ತಾ ಬೇರೆ-ಬೇರೆ ರಣತಂತ್ರಗಳನ್ನು ಹೆಣೆಯುತ್ತಿದ್ದರೆ, ಸಚಿವ ಎಚ್.ಡಿ.ರೇವಣ್ಣ ಮಾತ್ರ ದೇವರ ಮೊರೆ ಹೋಗಿದ್ದಾರೆ.
ಮೊನ್ನೆಯಷ್ಟೆ ಶೃಂಗೇರಿ ಶಾರದಾಂಬೆ ಮೊರೆ ಹೋಗಿದ್ದ ಎಚ್.ಡಿ.ರೇವಣ್ಣ ಅವರು, ಇಂದು ಸಹ ಉಡುಪಿ ಮತ್ತು ಸುತ್ತಮುತ್ತಲ ಹಲವು ದೇವಸ್ಥಾನಗಳಿಗೆ ರೇವಣ್ಣ ಅವರು ಭೇಟಿ ನೀಡಿದ್ದಾರೆ.
ಒಂದು ವಾರದಿಂದ ಚಪ್ಪಲಿ ಧರಿಸದೆ ಬರಿಗಾಲಲ್ಲಿ ನಡೆದಾಡುತ್ತಿರುವ ರೇವಣ್ಣ ಅವರು ಇಂದು ಕೊಲ್ಲೂರಿನ ಮೂಕಾಂಬಿಕೆ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು, ಅಲ್ಲಿಂದ ಆನೆಗುಡ್ಡ ಗಣಪತಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು.

ಎಚ್.ಡಿ.ರೇವಣ್ಣ ಅವರು ಕೆಲವು ದಿನಗಳಿಂದ ಹಲವು ದೇವಸ್ಥಾನಗಳನ್ನು ಸುತ್ತು ಹಾಕುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದರು, ಆ ನಂತರ ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು, ನಂತರ ಬೆಂಗಳೂರಿನಲ್ಲಿ ಮೃತ್ಯುಂಜಯ ಹೋಮ ಮಾಡಿಸಿದರು ಇಂದು ಕೊಲ್ಲೂರಿಗೆ ಭೇಟಿ ನೀಡಿದ್ದಾರೆ.
ಕಾಂಗ್ರೆಸ್ನ ಬಹುತೇಕ ಅತೃಪ್ತ ಶಾಸಕರು ಸಚಿವರು ಸಚಿವ ರೇವಣ್ಣ ಅವರಿಂದಲೇ ಸರ್ಕಾರಕ್ಕೆ ಈ ಗತಿ ಬಂದಿದೆ ಎಂದು ರೇವಣ್ಣ ಅವರನ್ನು ಗುರಿ ಮಾಡುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ತಲೆಕೊಡಿಸಿಕೊಳ್ಳದೆ ರೇವಣ್ಣ ಅವರು ತಮ್ಮ ಪಾಡಿಗೆ ತಾವು ದೇವಸ್ಥಾನಗಳನ್ನು ಸುತ್ತು ಹೊಡೆಯುತ್ತಿದ್ದಾರೆ.












Click it and Unblock the Notifications