Attur Basilica: ಅತ್ತೂರು ಜಾತ್ರೆಗೆ ಚಾಲನೆ, ಮೊದಲ ದಿನವೇ ಜನಸಾಗರ
ಉಡುಪಿ, ಜ 23: ಕಾರ್ಕಳದ ಸಂತ ಮಾರಿ ಖ್ಯಾತಿಯ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಜಾತ್ರೆ ಆರಂಭಗೊಂಡಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಸರಳವಾಗಿ ನಡೆದಿದ್ದ ಜಾತ್ರೆಗೆ ಈ ಬಾರಿ ಅದ್ದೂರಿ ಚಾಲನೆ ಸಿಕ್ಕಿದೆ.
ಮೊದಲ ದಿನ ( ಜ 22) ಕಾರ್ಕಳ ಮಾತ್ರವಲ್ಲದೆ ನೆರೆಯ ತಾಲೂಕು ಮತ್ತು ಜಿಲ್ಲೆಯ ಜನ ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ನೆರವೇರಿಸಿದರು. ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರು ವಂ| ಅಲ್ಬನ್ ಡಿ'ಸೋಜಾ ಅವರು ಬೆಳಿಗ್ಗೆ ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮಹೋತ್ಸವಕ್ಕೆ ಚಾಲನೆ ನೀಡಿದರು.
Attur Basilica: ಅತ್ತೂರು ಜಾತ್ರೆ ಆರಂಭಗೊಂಡರೆ ರಾತ್ರಿ ಆಗುವುದಿಲ್ಲ: ಸಂತ ಲಾರೆನ್ಸ್ ಜಾತ್ರೆಗೆ ಕ್ಷಣಗಣನೆ
ಮೊದಲ ದಿನವಾದ ಭಾನುವಾರ ಸಂಜೆಯಿಂದಲೇ ಜನರು ಚರ್ಚ್ ಕಡೆ ಆಗಮಿಸಿ, ಮಳೆಗೆಗಳಲ್ಲಿ ಜನಜಾತ್ರೆ ಕಂಡುಬಂತು. ಕ್ರೈಸ್ತರು ಮಾತ್ರವಲ್ಲದೆ ಭಾವೈಕ್ಯದ ಕ್ಷೇತ್ರ ಅತ್ತೂರಿನಲ್ಲಿ ಹಿಂದೂ ಮತ್ತು ಮುಸ್ಲಿಮರೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡರು.
"ನೀವು ನನಗೆ ಸಾಕ್ಷಿಗಳಾಗುವಿರಿ" ಎಂಬುದು ಈ ಬಾರಿಯ ವಾರ್ಷಿಕ ಜಾತ್ರೆಯ ಘೋಷವಾಕ್ಯ. ಜನವರಿ 22 ರಿಂದ 26 ರತನಕ ಇಲ್ಲಿ ವಾರ್ಷಿಕ ಉತ್ಸವ ನಡೆಯಲಿದ್ದು ಒಟ್ಟು 35 ಬಲಿಪೂಜೆಗಳು ನಡೆಯಲಿವೆ.
ಅತ್ತೂರು ಜಾತ್ರೆ ಆರಂಭಗೊಂಡರೆ ರಾತ್ರಿ ಆಗುವುದಿಲ್ಲ ಎಂಬುದು ಈ ಭಾಗದ ಜನರ ಪ್ರತೀತಿ. ಆ ದಿನಗಳಲ್ಲಿ ಹಗಲು ರಾತ್ರಿಯೆನ್ನದೆ ಜನಸಾಗರವೇ ಜಾತ್ರೆಗೆ ಹರಿದು ಬರುತ್ತದೆ. ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ಸಂತ ಲಾರೆನ್ಸ್ ಚರ್ಚ್ಗೆ ವಿಶೇಷವಾಗಿ ವಿದ್ಯುತ್ ದೀಪ ಅಲಂಕಾರ ಮಾಡಲಾಗಿದೆ.
ಹಿಂದೂ ದೇವಾಲಯಗಳಲ್ಲಿ ಸಾಮಾನ್ಯವಾಗಿ ಇರುವ ಪುಷ್ಕರಣಿ ಈ ಚರ್ಚ್ ನಲ್ಲೂ ಇರುವುದು ವಿಶೇಷ. ಸಂತಾನಭಾಗ್ಯ ಸೇರಿದಂತೆ ಇಷ್ಟಾರ್ಥಗಳನ್ನು ಈಡೇರಿಸುವ ಆರಾಧ್ಯ ದೈವ ಸಂತ ಲಾರೆನ್ಸ್ ಎನ್ನುವುದು ಭಕ್ತರ ನಂಬಿಕೆ.
ಅದಕ್ಕಾಗಿ ವಿವಿಧ ಗಾತ್ರದ ಕ್ಯಾಂಡಲ್ಗಳನ್ನು ತಂದು ಜನರು ತಮ್ಮ ಬೇಡಿಕೆಗಳನ್ನು ದೇವರ ಮುಂದಿಡುತ್ತಾರೆ. ಇಲ್ಲಿ ಕ್ಯಾಂಡಲ್ ಹಚ್ಚಿ ಬೇಡಿಕೊಂಡರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಎಲ್ಲ ಧರ್ಮೀಯರಲ್ಲೂ ಇರುವುದು ಗಮನಿಸಬೇಕಾದ ವಿಚಾರ.
ಅತ್ತೂರು ಜಾತ್ರೆಯೆಂದರೆ ಈ ವರ್ಷ ಎಷ್ಟು ಜನ ಸೇರಬಹುದು, ಎಷ್ಟು ಸಂತೆ ಇರಬಹುದು ಎನ್ನುವುದು ಎಲ್ಲರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ. ಜಾಯಿಂಟ್ ವ್ಹೀಲ್, ವಿವಿಧ ಬಗೆಯ ತಿಂಡಿ ತಿನುಸುಗಳ ಅಂಗಡಿಗಳು, ಮನೋರಂಜನಾ ಕ್ರೀಡೆಗಳು ಸೇರಿದಂತೆ ಹಲವಾರು ವ್ಯಾಪಾರಸ್ಥರು ಇಲ್ಲಿ ಅಂಗಡಿಯನ್ನು ಹಾಕುತ್ತಾರೆ.