ಉಡುಪಿ: ನಿಧಿ ಕುಟುಂಬಕ್ಕೆ ನಾಲ್ಕು ಲಕ್ಷ ಪರಿಹಾರ ಘೋಷಣೆ
ಉಡುಪಿ, ಮೇ.30 : ನಿನ್ನೆಯಿಂದ ಆರಂಭವಾಗಿದ್ದ ವರುಣನ ಅಬ್ಬರ ಶಾಂತವಾಗಿದೆ. ಆದರೆ ಉಡುಪಿಯಲ್ಲಿ ಸಾಕಷ್ಟು ಹಾನಿ, ಸಾವು-ನೋವು ಸಂಭವಿಸಿದೆ. ನಿನ್ನೆ ನೆರೆಯಲ್ಲಿ ಕೊಚ್ಚಿಹೋದ ಬಾಲಕಿ ನಿಧಿಯ ಮೃತ ದೇಹ ಪತ್ತೆಯಾಗಿದೆ.
ಬಾಲಕಿಯ ಮನೆಯವರು ಹೈವೇ ಕಾಮಗಾರಿ ಅವಾಂತರದಿಂದ ಕೃತಕ ನೆರೆ ಅವರಿಸಿದ್ದು, ನಿಧಿ ಸಾವಿಗೆ ಗ್ರಾಮ ಪಂಚಾಯತ್ ನಿರ್ಲಕ್ಷ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ: ನೀರಲ್ಲಿ ಕೊಚ್ಚಿ ಹೋಗಿದ್ದ ನಿಧಿ ಶವವಾಗಿ ಪತ್ತೆ
ಈ ಹಿನ್ನೆಲೆಯಲ್ಲಿ ಪಾದಬೆಟ್ಟು ಮೃತ ಬಾಲಕಿಯ ಮನೆಗೆ ಭೇಟಿ ನೀಡಿದ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಇನ್ನು ಉಡುಪಿಗೆ ಆಗಮಿಸಿದ ಶೋಭಾ ಕರಂದ್ಲಾಜೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬಾಲಕಿ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದ್ದು, ಖಾತೆ ಹಂಚಿಕೆಯಲ್ಲಿ ಕಾರ್ಯನಿರತವಾಗಿದೆ.
ಸರ್ಕಾರವಿಲ್ಲದೇ ಅಧಿಕಾರಿಗಳು ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚತ್ತು ಈ ಕಡೆಗೆ ಗಮನ ಹರಿಸಲಿ ಎಂದು ಆಗ್ರಹಿಸಿದ್ದಾರೆ.