ಕರಾವಳಿಯಲ್ಲಿ ಧಾರ್ಮಿಕ ಕೇಂದ್ರಗಳು ಬಹುತೇಕ ಬಂದ್!
ಉಡುಪಿ, ಮಾರ್ಚ್ 19: ಕೊರೊನಾ ವೈರಸ್ ಮುನ್ನೆಚ್ಚರಿಕಾ ಕ್ರಮದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 144(3) ಸೆಕ್ಷನ್ ಹಾಕಲಾಗಿದ್ದು, ಧಾರ್ಮಿಕ ಕೇಂದ್ರಗಳು ಬಹುತೇಕ ಬಂದ್ ಆಗಿವೆ.
ಮುಖ್ಯವಾಗಿ ಉಡುಪಿ ಮೂರೂ ಧರ್ಮಗಳ ಪುಣ್ಯಕ್ಷೇತ್ರಗಳ ಸಂಗಮ. ಮಂದಿರ, ಮಸೀದಿ ಮತ್ತು ಚರ್ಚ್ ಗಳಿಗೆ ಇಲ್ಲಿ ಕೊರತೆ ಇಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಮೂರೂ ಸಮುದಾಯದ ಧಾರ್ಮಿಕ ಕೇಂದ್ರಗಳು ಕೊರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರು ಜಾಸ್ತಿ ಸಂಖ್ಯೆಯಲ್ಲಿ ಬರದಂತೆ ಮನವಿ ಮಾಡಿವೆ.
ಉಡುಪಿ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ದೇವರ ಸೇವೆಗಳು ಪೂರ್ತಿ ಬಂದ್ ಆಗಿದ್ದು, ದರ್ಶನಕ್ಕೆ ಮಾತ್ರ ಅವಕಾಶ ಇದೆ. ಇನ್ನು ಚರ್ಚ್ ಗಳಲ್ಲೂ ಪ್ರಾರ್ಥನೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಭಕ್ತರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕೆಲಸ ಚರ್ಚ್ ಗಳಲ್ಲಿ ಆಗುತ್ತಿದೆ. ಇನ್ನು ಉಡುಪಿಯ ಮಸೀದಿ, ಮದರಸಾಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿಯ ಜಾಮಿಯಾ ಮಸೀದಿಯಲ್ಲಿ ಮುಸಲ್ಮಾನ ಬಾಂಧವರು ಒಳಾಂಗಣದಲ್ಲಿ ಸಾಮೂಹಿಕ ನಮಾಜ್ ಗೆ ನಿರ್ಬಂಧ ಇದೆ.
ಹೊರಗಡೆ ತಾತ್ಕಾಲಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ. ಮಸೀದಿಯಲ್ಲಿ ಮಹಿಳೆಯರ ನಮಾಜ್, ಮದರಸಾ, ಸ್ಟಡಿ ಕ್ಲಾಸ್ ಗೆ ಅವಕಾಶವಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹೀಗಾಗಿ ಪುಣ್ಯಕ್ಷೇತ್ರಗಳ ತವರಿನಲ್ಲಿ ಧಾರ್ಮಿಕ ಕೇಂದ್ರಗಳು ಬಿಕೋ ಎನ್ನುತ್ತಿವೆ.