ಕೊರೊನಾ, ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸಿಕ್ಕ ಬಹುದೊಡ್ಡ ಗಿಫ್ಟ್
ಉಡುಪಿ, ಆ 20: ಕೊರೊನಾ ಲಾಕ್ ಡೌನ್ ವೇಳೆ ಸಾವಿರಾರು ಜನರನ್ನು ಬೀದಿಗೆ ಹಾಕಿದ ಸರಕಾರ, ಕಾರ್ಮಿಕರನ್ನು ಉಪವಾಸ ಬೀಳುವಂತೆ ಮಾಡಿತು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆ ಆಪಾದನೆ ಮಾಡಿದರು.
Recommended Video
"ಬೇರೆ ಪಕ್ಷದ ಶಾಸಕರನ್ನು ಖರೀದಿಸಿ ಸರಕಾರ ರಚಿಸಿರುವ ಯಡಿಯೂರಪ್ಪನವರ ನೇತೃತ್ವದ ಸರಕಾರ, ಭ್ರಷ್ಟಾಚಾರ ಮತ್ತು ಜನವಿರೋಧಿ ಕೆಲಸದಲ್ಲಿ ತೊಡಗಿದೆ. ಕೊರೊನಾ ಬಂದಿರುವುದು, ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸಿಕ್ಕ ದೊಡ್ಡ ಗಿಫ್ಟ್"ಎಂದು ಸೊರಕೆ ಆಕ್ರೋಶ ವ್ಯಕ್ತ ಪಡಿಸಿದರು.
ಕೆಪಿಸಿಸಿ ಆದೇಶದಂತೆ, ರಾಜ್ಯ ಸರಕಾರದ ಜನವಿರೋಧಿ ನೀತಿ, ಭ್ರಷ್ಟಾಚಾರಗಳನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ ಜನಧ್ವನಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಸೊರಕೆ ಮಾತನಾಡಿದರು.

"ಲಾಕ್ ಡೌನ್ ನಂತರ ಕಾರ್ಮಿಕರ ಹಿತ ಕಾಯಬೇಕಾಗಿದ್ದ ಸರಕಾರ ಕೆಲಸದ ಅವಧಿಯನ್ನು ಹೆಚ್ಚಿಸಿತು. ಎಲ್ಲಾ ರಂಗದಲ್ಲೂ ಬಿಎಸ್ವೈ ಮತ್ತು ಮೋದಿ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ"ಎಂದು ಸೊರಕೆ ಕಿಡಿಕಾರಿದರು.
"ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿದೆ. ಹಲವಾರು ಜನ ಮನೆಯನ್ನು ಕಳೆದುಕೊಂಡಿದ್ದಾರೆ. ಬೆಳೆಗಳೆಲ್ಲಾ ನಾಶವಾಗಿವೆ. ಆದರೆ, ಸರಕಾರ ತನ್ನ ಜವಾಬ್ದಾರಿಯನ್ನು ಮರೆತಿದೆ"ಎಂದು ವಿನಯ್ ಕುಮಾರ್ ಸೊರಕೆ ಹೇಳಿದರು.
"ಬಿಎಸ್ವೈ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಇದರ ತನಿಖೆ ನಡೆದು, ಸತ್ಯಾಂಶ ಹೊರಬರಲಿ"ಎಂದು ಸೊರಕೆ ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.












Click it and Unblock the Notifications