ತಟ ರಕ್ಷಣಾ ಪಡೆಯಿಂದ ಪಶ್ಚಿಮ ಕರಾವಳಿಯಲ್ಲಿ 2 ರಾಡಾರ್ ಸ್ಟೇಷನ್
ಮಂಗಳೂರು, ಫೆಬ್ರವರಿ 01 : ಪಶ್ಚಿಮ ಕರಾವಳಿ ಸಮುದ್ರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಎರಡು ನೂತನ ರಾಡಾರ್ ಗಳನ್ನು ಅಳವಡಿಸಲು ಭಾರತೀಯ ತಟ ರಕ್ಷಣಾ ಪಡೆ ಮುಂದಾಗಿದೆ.
ಪಶ್ಚಿಮ ಕರಾವಳಿಯ ಆಳ ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕಣ್ಗಾವಲಿಡುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿಯಲ್ಲಿ ಹೊಸ ಎರಡು ರಾಡಾರ್ ಕೇಂದ್ರಗಳು ತಲೆ ಎತ್ತಲಿವೆ ಎಂದು ಕರಾವಳಿ ರಕ್ಷಣಾ ಪಡೆ ಡಿಐಜಿ ಹಾಗೂ ಕಮಾಂಡರ್ ಎಸ್.ಎಸ್.ದಾಸಿಲ ತಿಳಿಸಿದ್ದಾರೆ.
ಬೇಲೆಕೇರಿಯಲ್ಲಿ ಈಗಾಗಲೇ ರಾಡಾರ್ ಕೇಂದ್ರ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮಗೊಂಡಿದೆ ಎಂದ ದಾಸಿಲ ಕುಂದಾಪುರದ ಲೈಟ್ ಹೌಸ್ನಲ್ಲಿ ರಾಡಾರ್ ಕೇಂದ್ರ ನಿರ್ಮಾಣ ಆಗಲಿದೆ. ಕರಾವಳಿ ತೀರದ ಭಟ್ಕಳ ಹಾಗೂ ಸುರತ್ಕಲ್ ಗಳಲ್ಲಿ ಈಗಾಗಲೇ ರಾಡಾರ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಈ ಕೇಂದ್ರಗಳು ಸಮುದ್ರ ತಟದಿಂದ ಆಳ ಸಮುದ್ರದಲ್ಲಿ 60 ರಿಂದ80 ನಾಟಿಕಲ್ ಮೈಲ್ ದೂರದವರೆಗೆ ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇರಿಸಬಲ್ಲವು. ಈ ರಾಡಾರ್ಗಳು ಗುಣಮಟ್ಟದ ಕ್ಯಾಮರಾಗಳನ್ನು ಹೊಂದಿವೆ.
ಸಮುದ್ರದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಜತೆಗೆ ಸಂಕಷ್ಟ, ಅಪಾಯದಲ್ಲಿರುವ ಮೀನುಗಾರರಿಗೆ ತಕ್ಷಣದ ಮಾನವೀಯ ನೆರವನ್ನು ಕೂಡಾ ತಟರಕ್ಷಣಾ ಪಡೆಯ ನೌಕೆಗಳ ಮೂಲಕ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.












Click it and Unblock the Notifications