ಮಣಿಪಾಲಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್ ವೈ, ವೀರೇಂದ್ರ ಹೆಗ್ಗಡೆ
ಉಡುಪಿ, ಡಿಸೆಂಬರ್ 21: ನಿನ್ನೆ ಬೆಳಿಗ್ಗೆ ಉಸಿರಾಟದಲ್ಲಿ ಏರುಪೇರಾದ ಕಾರಣ ಕಸ್ತೂರ ಬಾ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಶ್ರೀಗಳನ್ನು ನೋಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಈ ಸಂದರ್ಭ ಮಾತನಾಡಿದ ಅವರು, "ಪೇಜಾವರ ಶ್ರೀಗಳು ಗುಣಮುಖರಾಗಲು ಪ್ರಾರ್ಥಿಸಬೇಕು. ನಿನ್ನೆಗಿಂತ ಇಂದು ಅವರ ಆರೋಗ್ಯದಲ್ಲಿ ಸುಧಾರಣೆ ಆಗಿದೆ. ಅವರು ಗುಣಮುಖರಾಗಿ ಬಂದು ಪೂಜೆ ಮಾಡಲಿ ಎಂಬುದು ನಮ್ಮೆಲ್ಲರ ಹಾರೈಕೆ. ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಶ್ರೀಗಳು ಎಚ್ಚರವಾಗಿದ್ದಾರೆ. ಸೋಂಕು ಆಗಬಾರದೆಂದು ಕಟ್ಟೆಚ್ಚರ ವಹಿಸಲಾಗಿದೆ" ಎಂದು ತಿಳಿಸಿದರು.
ಉಡುಪಿ ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ
ಇದೇ ಸಂದರ್ಭ, ಅಯೋಧ್ಯೆ ರಾಮಮಂದಿರ ಹೋರಾಟ ನೆನಪಿಸಿಕೊಂಡ ಯಡಿಯೂರಪ್ಪ ಅವರು, "ಸ್ವಾಮೀಜಿ ಜೊತೆ ಅಂದು 16 ಜನ ಇದ್ದೆವು. 16 ಜನರ ಪೈಕಿ ನಾನೂ ಒಬ್ಬ. ಇದು ರಾಮಮಂದಿರ ಕಟ್ಟುವ ಸುಸಂದರ್ಭ. ಅದನ್ನು ಅವರು ಕಣ್ತುಂಬಿಕೊಳ್ಳಬೇಕು. ಓಡಾಟ ಕಡಿಮೆ ಮಾಡಲು ನೂರಾರು ಬಾರಿ ಅವರಿಗೆ ಹೇಳಿದ್ದೆ. ವಯೋ ಸಹಜ ಸಮಸ್ಯೆ ಕಾಡುತ್ತಿದೆ" ಎಂದರು.
"ಈಗಿರುವ ಆರೋಗ್ಯ ಸಮಸ್ಯೆಯನ್ನು ಅವರು ದಾಟಿ ಬರಲಿ. ವೈದ್ಯರು ಎರಡು ದಿನಗಳಲ್ಲಿ ಆರೋಗ್ಯ ಸುಧಾರಣೆ ಆಗಿದೆ ಎಂದು ತಿಳಿಸಿದ್ದಾರೆ. ಮೋದಿ, ಅಮಿತ್ ಶಾ ಅವರೂ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ" ಎಂದು ತಿಳಿಸಿದರು.
ಡಾ. ವೀರೇಂದ್ರ ಹೆಗ್ಗಡೆ ಭೇಟಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೂ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. "ಶ್ರೀಗಳನ್ನು ನೋಡಿದೆ. ನಿಧಾನವಾಗಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಸ್ವಾಮೀಜಿಗಳಿಗೆ ಬೇರೆ ಯಾವುದೇ ಕಾಯಿಲೆ ಇಲ್ಲ. ಅವರಿಗೆ ಶೀಘ್ರ ಆರೋಗ್ಯ ವೃದ್ಧಿಯಾಗಲಿ. ಇಡೀ ದೇಶ ಅವರಿಗಾಗಿ ಪ್ರಾರ್ಥನೆ ಮಾಡುತ್ತಿದೆ. ಅವರು ಗುಣಮುಖರಾಗುತ್ತಾರೆ" ಎಂದು ಹಾರೈಸಿದ್ದಾರೆ.
ಪೇಜಾವರ ಶ್ರೀಗಳ ಶಿಷ್ಯೆ, ಉದ್ಯಮಿ ನೀರಾ ರಾಡಿಯಾ ಕೂಡ ಕೆಎಂಸಿಗೆ ಇಂದು ಬೆಳಿಗ್ಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.