ಗೋಡ್ಸೆ ಅನುಯಾಯಿ ಆದಿತ್ಯನಾಥ್ ರಿಂದ ನಮಗೆ ಪಾಠ ಬೇಡ: ಸಿದ್ದರಾಮಯ್ಯ
ಉಡುಪಿ, ಜನವರಿ 8: ಕಲ್ಲಡ್ಕ ಪ್ರಭಾಕರ ಭಟ್ ಶಾಲೆಗೆ ಮಾತ್ರ ಏಕೆ ಊಟ, ಬೇರೆ ಶಾಲೆಗಳಿಗೂ ಕೊಡಬಹುದಲ್ಲಾ? ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಾಫ್ಟ್ ಹಿಂದುತ್ವ ಅಂದರೆ ಏನು? ಈ ಸಾಫ್ಟ್, ಹಾರ್ಡ್ ಏನೂ ಇಲ್ಲ. ನಾನು ದೇವಸ್ಥಾನಗಳಿಗೆ ಹೋಗುತ್ತೇನೆ. ಹಾಗಂತ ಎಲ್ಲಾ ದೇವಸ್ಥಾನಕ್ಕೆ ಹೋಗಲ್ಲ. ಕೃಷ್ಣಮಠಕ್ಕೆ ಹೋಗದೇ ಇರೋದು ದೊಡ್ಡ ವಿಷಯ ಅಲ್ಲ ಎಂದು ತಮ್ಮ ವಿರುದ್ಧ ಆರೋಪಗಳಿಗೆ ಉತ್ತರಿಸಿದರು.
ಕರಾವಳಿಯಲ್ಲಿ ಉಲ್ಬಣವಾಗಿರುವ ಕೋಮು ಸಂಘರ್ಷಕ್ಕೆ ಕೋಮುವಾದಿ ಪಕ್ಷವೇ ಕಾರಣ. ಕೋಮು ಗಲಭೆಗಳ ಹಿಂದೆ ಸಂಘ ಪರಿವಾರದ ಕುಮ್ಮಕ್ಕು ಇದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಕೋಮುವಾದ ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ಬಿಜೆಪಿ ಬಿಡಬೇಕು ಎಂದರು.

ಪಿಎಫ್ ಐ, ಬಜರಂಗದಳ ನಿಷೇಧದ ಬಗ್ಗೆ ಮಾತನಾಡಿ, ಯಾವುದೇ ಸಂಘಟನೆ ನಿಷೇಧದ ಬಗ್ಗೆ ಚರ್ಚೆ ಆಗಿಲ್ಲ. ಆದರೆ ಪಿಎಫ್ ಐ, ಬಜರಂಗದಳ, ಶ್ರೀರಾಮ ಸೇನೆ ಸಂಘಟನೆಗಳ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದರು.
ಯೋಗಿಗೆ ಟಾಂಗ್
ಕರ್ನಾಟಕವು ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶ ಯಾವ ಸ್ಥಾನದಲ್ಲಿದೆ? ಉತ್ತರ ಪ್ರದೇಶದ ಆಡಳಿತ ಜಂಗಲ್ ರಾಜ್, ಯೋಗಿ ಆದಿತ್ಯನಾಥ್ ಜಂಗಲ್ ರಾಜ್ ಮುಖ್ಯಮಂತ್ರಿ ಎಂದು ಟೀಕಿಸಿದರು.
ಗೋಡ್ಸೆ ಅನುಯಾಯಿ ಯೋಗಿ ಅಂತಹವರಿಂದ ನಮಗೆ ಅಭಿವೃದ್ಧಿ ಪಾಠ ಬೇಡ. ಆಹಾರದಿಂದ ಹಿಂದುತ್ವ ನಿರ್ಧಾರ ಆಗಲ್ಲ ಎಂದು ಅವರು ಹೇಳಿದರು.












Click it and Unblock the Notifications