ಸಿಎಂ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ- ಕೋಟ ಶ್ರೀನಿವಾಸ್ ಪೂಜಾರಿ
ಉಡುಪಿ, ಜೂನ್ 27: ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಉಡಾಫೆಯ, ಹತಾಶೆಯ, ಅತಿರೇಕದ, ಸರ್ವಾಧಿಕಾರಿತನದ ಮಾತನ್ನಾಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಬೇಕಾಗುತ್ತೆ ಎಂಬ ಸಿ.ಎಂ ಹೇಳಿಕೆ, ವರ್ತನೆ ಖಂಡನೀಯ. ಮುಖ್ಯಮಂತ್ರಿ ಈ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಸಿ.ಎಂ ಗ್ರಾಮ ವಾಸ್ತವ್ಯ ಪ್ರಚಾರಕ್ಕೆ ಮಾತ್ರ. ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಪಂಚತಾರಾ ಹೋಟೆಲ್ ನಿಂದ ಗ್ರಾಮವಾಸ್ತವ್ಯಕ್ಕೆ ತೆರಳಿದ್ದರಿಂದ ಸಿ.ಎಂಗೆ ಸವಲತ್ತು ಅನಿವಾರ್ಯ ಇರಬಹುದು ಎಂದು ವ್ಯಂಗ್ಯವಾಡಿದರು. ಬಡವರ ಕಷ್ಟಕ್ಕೆ ಸ್ಪಂದನೆ ಕೊಡಬೇಕು ಅಂತ ಸಿಎಂಗೆ ಅನಿಸಿಲ್ಲ. ಕರ್ನಾಟಕ ರಾಜ್ಯದಲ್ಲಿ ಒಂದೇ ಕ್ಷೇತ್ರದಲ್ಲಿ ನೀವು ಗೆದ್ದವರು. ಹಾಗಾದರೆ ಮುಖ್ಯಮಂತ್ರಿಯಾಗಿ ಒಂದೇ ಕ್ಷೇತ್ರಕ್ಕೆ ಅನುಕೂಲ ಮಾಡಿಕೊಡುತ್ತೀರಾ? ಎಂದು ಕಿಡಿಕಾರಿದರು.
ಗೋ ಕಳ್ಳತನ ವಿರುದ್ಧ ಕಠಿಣ ಕ್ರಮಕ್ಕೆ ಸಂಸದ ನಳಿನ್ ಆಗ್ರಹ
ನೀವು ಇಡೀ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ. ಆರೂವರೆ ಕೋಟಿ ಜನರ ಹಕ್ಕುಗಳನ್ನು, ಸಮಸ್ಯೆಗಳನ್ನು ಕೇಳಬೇಕಾದ ನೀವು ಉಢಾಫೆ ಮಾತು ಆಡುತ್ತಿರುವುದು ಖಂಡನೀಯ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಂಡವರು ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಇಂತಹ ಉಡಾಫೆ ಮಾತು ಆಡುವುದು ಬೇಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ಬೇಡ ಅನಿಸಿದರೆ ರಾಜೀನಾಮೆ ಕೊಡುವುದೇ ಸೂಕ್ತ. ಬಿಜೆಪಿ ನಿಮ್ಮ ವರ್ತನೆಯನ್ನು ಗಮನಿಸುತ್ತಿದೆ. ಸರ್ವಾಧಿಕಾರದ ವರ್ತನೆ ಮುಂದುವರೆದರೆ ರಾಜ್ಯಾದ್ಯಂತ ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.