ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಮಳೆಯಾದ ಉಡುಪಿಗೆ ಕೇಂದ್ರ ತಂಡ ಭೇಟಿ
ಉಡುಪಿ, ಸೆಪ್ಟೆಂಬರ್ 12: ರಾಜ್ಯದ ಅತಿವೃಷ್ಠಿ ಹಾನಿ ಪರಿಶೀಲನೆಗೆ ಆಗಮಿಸಿರುವ ಕೇಂದ್ರ ಸರಕಾರದ ಅಧಿಕಾರಿಗಳ ತಂಡವು ಬುಧವಾರ ಉಡುಪಿ ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿತು. ಕಾರ್ಕಳ ತಾಲೂಕಿನ ಮಳೆ ಹಾನಿಗೊಳಗಾದ ಕುಕ್ಕಂದೂರು, ಮೀಯಾರು, ಹೊಸ್ಮಾರು, ಈದು, ನೂರಾಲ್ ಬೆಟ್ಟು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ,ಕುಂದಾಪುರ ಎಸಿ ಭೂಬಾಲನ್, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೇಂದ್ರದ ತಂಡಕ್ಕೆ ಮಾಹಿತಿ ನೀಡಿದರು. ಆ ಬಳಿಕ ತಂಡವು ಕಾರ್ಕಳದ ಐಬಿಯಲ್ಲಿ ನಷ್ಡ ಪರಿಹಾರದ ಕುರಿತು ಸಮಾಲೋಚನೆ ನಡೆಸಿ, ಗರಿಷ್ಠ ಪರಿಹಾರದ ಭರವಸೆ ನೀಡಿತು.
ಕಾಪು ತಾಲೂಕಿನ ಹಲವು ಪ್ರದೇಶಗಳಿಗೂ ಭೇಟಿ ನೀಡಿದ ತಂಡವು ಗುರುವಾರ ದಕ್ಷಿಣ ಕನ್ನಡ, ಕೊಡಗು ಮತ್ತಿತರ ಕಡೆಗಳಲ್ಲಿ ಮಳೆ ಹಾನಿಯಿಂದಾದ ನಷ್ಟ ಅಂದಾಜಿಸಲಿದೆ. ಎರಡು ದಿನಗಳ ಮಳೆ ಹಾನಿ ಪರಿಶೀಲನೆ ಬಳಿಕ ವಾಪಸಾಗಿ, ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.
ಕೇಂದ್ರದ ತಂಡದಲ್ಲಿ ಆರ್ಥಿಕ ಸಚಿವಾಲಯದ ಉಪ ಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್, ಹೆದ್ದಾರಿ ಪ್ರಾಧಿಕಾರದ ಸದಾನಂದ ಬಾಬು ಮತ್ತಿತರರಿದ್ದಾರೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಮಳೆ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.