ಟಿಕೆಟ್ ಹಂಚಿಕೆ ಕಗ್ಗಂಟು: ಉಡುಪಿಯಿಂದ ಶೋಭಾ ಕರಂದ್ಲಾಜೆಗೆ ಟಿಕೆಟ್?
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಕುಂದಾಪುರ ಕ್ಷೇತ್ರದಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತು ಕಾರ್ಕಳದಿಂದ ಹಾಲಿ ಶಾಸಕ ಸುನಿಲ್ ಕುಮಾರ್ ಗೆ ಟಿಕೆಟ್ ಘೋಷಣೆ ಮಾಡಿದೆ. ಹಾಲಾಡಿ ಪಕ್ಷೇತರ ಶಾಸಕರಾಗಿದ್ದರೂ, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡವರು.
ಇನ್ನು ಸುನಿಲ್ ಕುಮಾರ್ ಗೆ ಟಿಕೆಟ್ ಸಿಕ್ಕಿದ್ದು ನಿರೀಕ್ಷಿತ. ಅವರಿಗೆ ಕಾರ್ಕಳದಲ್ಲಿ ಅಂತಹ ಪೈಪೋಟಿ ಇರಲಿಲ್ಲ. ಆದರೆ, ಬಿಜೆಪಿ ವರಿಷ್ಠರಿಗೆ ತಲೆನೋವಾಗಿರೋದು ಉಡುಪಿ ಕ್ಷೇತ್ರ. ಉಡುಪಿ ವಿಧಾನ ಸಭಾಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ದೊಡ್ಡ ತಲೆನೋವಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಶಕ್ತಿ ಕೇಂದ್ರ ಎಂದು ಕರೆಸಿಕೊಳ್ಳುವ ಕ್ಷೇತ್ರದಲ್ಲೇ ಬಿಜೆಪಿಗೆ ಭಿನ್ನಮತದ ಭೀತಿ ಉಂಟಾಗಿದೆ. ಶೋಭಾ ಕರಂದ್ಲಾಜೆ ಮತ್ತು ಮಾಜಿ ಶಾಸಕ ರಘುಪತಿ ಭಟ್ ನಡುವಿನ ಭಿನ್ನಮತದಿಂದಾಗಿ, ಅಭ್ಯರ್ಥಿ ಘೋಷಣೆ ಮಾಡಲು ತೊಡಕಾಗಿದೆ ಎನ್ನಲಾಗುತ್ತಿದೆ. ಬಿಜೆಪಿ ಮೊದಲ ಪಟ್ಟಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರಿಲ್ಲ.
ಬಿಜೆಪಿಗೆ ಉಡುಪಿ ಅಂದ್ರೆ ಹೆಮ್ಮೆ ಅಂತ ಬೀಗುತ್ತಿದ್ದ ಕೇಂದ್ರ ನಾಯಕರಿಗೆ ಜಿಲ್ಲಾ ಶಕ್ತಿ ಕೇಂದ್ರದಲ್ಲೇ ಅಭ್ಯರ್ಥಿ ಆಯ್ಕೆಯ ಸಂಕಟ ಎದುರಾಗಿದೆ. ಮಾಜಿ ಶಾಸಕ ರಘುಪತಿ ಭಟ್ ಗೆ ಜನಬೆಂಬಲ ಇದೆ. ಆದ್ರೆ ಸಂಸದೆ ಶೋಭಾ ಕರಂದ್ಲಾಜೆ ಇವರ ಆಯ್ಕೆಗೆ ತೊಡಕಾಗಿದ್ದಾರೆ.
ಈ ಬಾರಿ ವಿದಾನಸಭೆ ಪ್ರವೇಶಿಸಲು ಶೋಭಾ ಕೂಡ ಉತ್ಸುಕರಾಗಿದ್ದಾರೆ. ಜೊತೆಗೆ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷೆ ಹೊಂದಿರುವ ಉದಯ್ ಕುಮಾರ್ ಶೆಟ್ಟಿ ಕೂಡ ಹಿಂಬಾಗಿಲಿನ ಪ್ರಯತ್ನ ಮುಂದುವರಿಸಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ಶೋಭಾ ಕರಂದ್ಲಾಜೆಗೆ ಕೊನೇ ಕ್ಷಣದಲ್ಲಿ ಟಿಕೆಟ್ ಘೋಷಣೆಯಾದರೂ ಆಗಬಹುದು, ಮುಂದೆ ಓದಿ

ರಘುಪತಿ ಭಟ್ ಗೆ ಟಿಕೆಟ್ ಕೈ ತಪ್ಪಿತ್ತು
ಕಳೆದ ಚುನಾವಣೆಯಲ್ಲಿ ನೈತಿಕ ಕಾರಣಕ್ಕೆ ರಘುಪತಿ ಭಟ್ ಗೆ ಟಿಕೆಟ್ ಕೈ ತಪ್ಪಿತ್ತು. ಈ ಬಾರಿಯ ಮೊದಲ ಪಟ್ಟಿಯಲ್ಲಿ ಭಟ್ಟರ ಹೆಸರು ಅಂತಿಮಗೊಂಡರೂ ಪ್ರಕಟವಾಗಲಿಲ್ಲ. ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬರುತ್ತಾರೆ ಎಂದು ಕಾದು ಸುಸ್ತಾದ ಕಾರ್ಯಕರ್ತರು, ಈಗ ಮತ್ತಷ್ಟು ಗೊಂದಲದಲ್ಲಿ ಬಿದ್ದಿದ್ದಾರೆ.

ಉಡುಪಿ ಮಷ್ಟದ ಯತಿ ಲಕ್ಷ್ಮೀವರ ತೀರ್ಥರು
ಇನ್ನೋರ್ವ ಟಿಕೆಟ್ ಆಕಾಂಕ್ಷಿ ಶಿರೂರು ಮಠದ ಲಕ್ಷ್ಮೀವರ ತೀರ್ಥರು, ಈಗಾಗಲೇ ಬಹಿರಂಗ ಪ್ರಚಾರ ಆರಂಭಿಸಿಯೇ ಬಿಟ್ಟಿದ್ದಾರೆ. ಬಿಜೆಪಿಯ ಒಳಜಗಳದಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ, ಯಾಗಿಗೆ ಲಾಭ ಅಗುತ್ತೆ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಬೆಂಗಳೂರು ಯಶವಂತಪುರದಿಂದ ಒಮ್ಮೆ ಶಾಸಕಿಯಾಗಿ ಆಯ್ಕೆಯಾಗಿದ್ದ ಶೋಭಾ ಕರಂದ್ಲಾಜೆಗೆ ಅಸೆಂಬ್ಲಿ ಟಿಕೆಟ್ ನೀಡಬೇಕೆಂದು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ.

ಶೋಭಾ ಕರಂದ್ಲಾಜೆಗೆ ಕೊನೇ ಕ್ಷಣದಲ್ಲಿ ಟಿಕೆಟ್ ಘೋಷಣೆ?
ಬಿಜೆಪಿ ಹೈಕಮಾಂಡ್ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡುವುದಕ್ಕೆ ಮುಂದಾದರೆ ರಘುಪತಿ ಭಟ್ ಬಣದ ಬಂಡಾಯ ಭಯ ಎದುರಾಗಲಿದೆ. ಬಿಜೆಪಿಯ ಪ್ರಯೋಗ ಶಾಲೆಯಲ್ಲಿ ಈ ಬಾರಿ ಸಂಸದೆ ಶೋಭಾ ಕರದ್ಲಾಂಜೆ , ರಘುಪತಿ ಭಟ್, ಉದಯ್ ಕುಮಾರ್ ಶೆಟ್ಟಿ ಈ ಮೂರು ಜನರಲ್ಲಿ ಯಾರು ಪಾಸಾಗ್ತಾರಾ ಕಾದು ನೋಡಬೇಕಿದೆ. ಕೊನೆ ಕ್ಷಣದ ಗೊಂದಲದಿಂದಾಗಿ, ರಘುಪತಿ ಭಟ್ ಹೆಸರು ಘೋಷಣೆಯಾಗಲಿಲ್ಲ ಎನ್ನಲಾಗುತ್ತಿದೆ.

ಕಾಪು ಮತ್ತು ಬೈಂದೂರು ಕ್ಷೇತ್ರದಲ್ಲೂ ಕಗ್ಗಂಟು
ಇನ್ನು ಕಾಪು ಮತ್ತು ಬೈಂದೂರು ಕ್ಷೇತ್ರದಲ್ಲೂ ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿನಯಕುಮಾರ್ ಸೊರಕೆಯನ್ನು ಮಣಿಸುವ ಅಭ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್ ನಿರತವಾಗಿದೆ.
ಇಲ್ಲಿ ಮಾಜಿ ಶಾಸಕ ಲಾಲಾಜಿ ಮೆಂಡನ್, ಸುರೇಶ್ ಶೆಟ್ಟಿ ಗುರ್ಮೆ ಪ್ರಬಲ ಆಕಾಂಕ್ಷಿಗಳು. ಮೊಗವೀರ ಕೋಟಾದಿಂದ ಲಾಲಾಜಿ ಮತ್ತು ಬಂಟ ಸಮುದಾಯದ ಕೋಟಾದಿಂದ ಟಿಕೆಟ್ ಗಳಿಸಲು ಸುರೇಶ್ ಶೆಟ್ಟಿ ಹರಸಾಹಸ ಪಡುತ್ತಿದ್ದಾರೆ.ಇನ್ನೂ ಇಬ್ಬರು ತೆರೆಮರೆಯಲ್ಲಿ ತಮ್ಮದೇ ಲಾಬಿ ಮುಂದುವರೆಸಿದ್ದಾರೆ.

ಸುಕುಮಾರ್ ಶೆಟ್ಟಿ. ಜಯಪ್ರಕಾಶ್ ಹೆಗ್ಡೆ
ಕೊನೆಯದಾಗಿ ಬೈಂದೂರು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಸುಕುಮಾರ್ ಶೆಟ್ಟಿ. ಆದರೆ, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ನಿಂದ ಬಂದ ಜಯಪ್ರಕಾಶ್ ಹೆಗ್ಡೆಯ ಹೆಸರೂ ಕೇಳಿ ಬಂದಿರುವುದರಿಂದ ಇಲ್ಲೂ ಬಿಜೆಪಿ ಟಿಕೆಟ್ ಫೈನಲ್ ಆಗಿಲ್ಲ.ಇಲ್ಲಿ ಬಿಜೆಪಿ ವಲಸಿಗರಿಗೆ ಮಣೆ ಹಾಕುತ್ತಾ ಅಥವಾ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಸುಕುಮಾರ್ ಶೆಟ್ಟಿಯವರಿಗೆ ಟಿಕೆಟ್ ಕೊಡುತ್ತಾ ಎಂಬುದು ಈ ವಾರದೊಳಗೆ ಗೊತ್ತಾಗಬಹುದು.












Click it and Unblock the Notifications