ಜಯಪ್ರಕಾಶ್ ಹೆಗ್ಡೆ ವಿಧಾನಸಭೆಗೋ ಲೋಕಸಭೆಗೋ? ಇನ್ನೂ ನಡೆ ನಿಗೂಢ
ಉಡುಪಿ, ಏಪ್ರಿಲ್ 4: ಕರಾವಳಿ ಭಾಗದಲ್ಲಿ ರಾಜಕೀಯ ಚಾಣಕ್ಯ ಎಂದೇ ಹೆಸರು ಪಡೆದಿರುವ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಪಾಳಯ ತೊರೆದು ಬಿಜೆಪಿ ಸೇರಿದ್ದು ಹಳೆಯ ಕತೆ. ಆದರೆ ಉಡುಪಿ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಸ್ಪರ್ಧೆ ಮಾಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.
ಕುಂದಾಪುರದಲ್ಲಿ ಬಿಜೆಪಿಯು ಹೆಗಡೆ ಅವರಿಗೆ ಟಿಕೆಟ್ ನೀಡುತ್ತದೆ ಎಂಬ ಗಾಳಿ ಸುದ್ದಿ ಹರಡಿರುವಾಗಲೇ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಜೆಡಿಎಸ್ ಗೆ ಹೋಗುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸಂಸದ, ಶಾಸಕರಾಗಿ ಕೆಲಸ ಮಾಡಿದ ಅನುಭವಿ ರಾಜಕಾರಣಿಯಾದ ಜಯಪ್ರಕಾಶ್ ಹೆಗ್ಡೆ ಅವರಿಗೆ ಪ್ರಬಲ ಸ್ಪರ್ಧೆ ಇರುವ ಕ್ಷೇತ್ರದಲ್ಲೇ ಬಿಜೆಪಿ ಟಿಕೆಟ್ ನೀಡುತ್ತದೆ ಎಂಬ ರಾಜಕೀಯ ವಿಶ್ಲೇಷಣೆಗಳು ಆರಂಭವಾಗಿವೆ.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಜತೆ ಒನ್ಇಂಡಿಯಾ ಕನ್ನಡ ಸಂದರ್ಶನ
ಕಾಪು, ಕುಂದಾಪುರ, ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿಯೂ ಜಯಪ್ರಕಾಶ್ ಹೆಗ್ಡೆ ಹೆಸರು ಕೇಳಿಬರುತ್ತಿದೆ. ಹೆಗ್ಡೆಯವರ ಪ್ರಚಾರ ಕಾರ್ಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಕ್ಷೇತ್ರದಲ್ಲಿ ಬಿರುಸಿನಿಂದ ನಡೆಯುತ್ತಿದೆ.
ನಾನೂ ಪಕ್ಷದ ಪರ ಪ್ರಚಾರ ಕಾರ್ಯ ಮಾಡುತ್ತಿದ್ದೇನೆ. ಪಕ್ಷದ ಡ್ರಾಫ್ಟ್ ಕಮಿಟಿ ಜವಾಬ್ದಾರಿಯನ್ನು ವಹಿಸಿದೆ. ಇಂತಹ ಕ್ಷೇತ್ರದಲ್ಲೇ ಟಿಕೆಟ್ ನೀಡಿ ಎಂದು ನಾನು ಕೇಳಿಲ್ಲ. ಪಕ್ಷ ಸಂಘಟನೆಗೆ, ಐದು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಸಹಾಯವಾಗಲಿ ಎಂದು ಪ್ರಚಾರ ಮಾಡುತ್ತಿದ್ದೇನೆ ಎಂದು ಉತ್ತರ ನೀಡಿದ್ದಾರೆ ಜಯಪ್ರಕಾಶ್ ಹೆಗ್ಡೆ.
ಕೊರ್ಗಿ ಜಯಪ್ರಕಾಶ್ ಹೆಗ್ಡೆ ವ್ಯಕ್ತಿ ಪರಿಚಯ
ಆದರೆ, ಜಯಪ್ರಕಾಶ್ ಹೆಗ್ಡೆ ಅವರು ಕುಂದಾಪುರ, ಬೈಂದೂರು ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಚಿಹ್ನೆಯಡಿ ಸ್ಪರ್ಧೆಗೆ ಇಳಿಯುವ ಉತ್ಸಾಹದಲ್ಲಿದ್ದಾರೆ ಎಂಬ ಮಾತು ಒಂದೆಡೆಯಾದರೆ, ಜಯಪ್ರಕಾಶ್ ಹೆಗ್ಡೆ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಚತುರ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅವರ ನಡೆ ಇನ್ನೂ ನಿಗೂಢವಾಗಿದೆ. ರಾಜಕೀಯ ಆಸಕ್ತರಲ್ಲಿ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.