ಉಡುಪಿಯಲ್ಲಿ ಬಿಸ್ಕೆಟ್ ನಲ್ಲಿ ಮೂಡಿದ ಗಣಪನ ಕಲಾಕೃತಿ
ಉಡುಪಿ, ಆಗಸ್ಟ್ 25: ಪರಿಸರ ಸ್ನೇಹಿ ಗಣೇಶ ಚತುರ್ಥಿಯ ಮಂತ್ರ ಜಪಿಸುತ್ತಿರುವ ಈ ಸಂದರ್ಭದಲ್ಲೇ ತಿನ್ನುವ ಬಿಸ್ಕೆಟ್ ನಿಂದ ತಯಾರಿಸಿದ ಗಣೇಶನ ಕಲಾಕೃತಿ ಉಡುಪಿಯ ಸಾಯಿರಾಧಾ ಟಿವಿಎಸ್ ಶೋರೂಮ್ನಲ್ಲಿ ಅನಾವರಣಗೊಂಡಿದೆ.
ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು ಹಾಗೂ ರವಿ ಅವರು ಮೂರು ದಿನಗಳ ಕಾಲ ಪರಿಶ್ರಮ ಪಟ್ಟು ಸುಮಾರು 15 ಕಿಲೋ ಗ್ರಾಂನಷ್ಟು ಬಗೆಬಗೆಯ ಬಿಸ್ಕೆಟ್ ಗಳನ್ನು ಬಳಸಿಕೊಂಡು ಈ ಸುಂದರ ಗಣೇಶನ ಕಲಾಕೃತಿಯನ್ನು ರಚಿಸಿದ್ದಾರೆ.

ಗಣೇಶನ ರಚನೆಯ ಹಾದಿ
ಆರಂಭದಲ್ಲಿ ರಟ್ಟನ್ನು ಬಳಸಿಕೊಂಡು ಗಣೇಶನ ಕಲಾಕೃತಿ ರಚಿಸಿ ನಂತರ ಅದರ ಮೇಲೆ ವಿವಿಧ ವಿನ್ಯಾಸದ ಬಿಸ್ಕೆಟ್ ಗಳನ್ನು ಅಂಟಿಸಿ ಆ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಈ ಕಲಾಕೃತಿ ಎಂಟು ಅಡಿ ಎತ್ತರ ಹಾಗೂ ಐದು ಅಡಿ ಅಗಲವಿದೆ.

ಪರಿಸರ ಸ್ನೇಹಿ ಗಣಪ
ಈ ವಿಶಿಷ್ಟ ಕಲಾಕೃತಿಯನ್ನು ಅನಾವರಣಗೊಳಿಸಿದ ಸಂಸ್ಥೆಯ ಎಂ.ಡಿ ಮನೋಹರ್ ಶೆಟ್ಟಿ ಮಾತನಾಡಿ ಸ್ವಚ್ಛ ಭಾರತ್ ಹಾಗೂ ಪರಿಸರ ಸ್ನೇಹಿ ಜೀವನ ಕ್ರಮಕ್ಕೆ ಅನುಗುಣವಾಗಿ ಇಂತಹ ಕಲಾಕೃತಿಗಳ ನಿರ್ಮಾಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು.

ಬಿಸ್ಕೆಟ್ ಗಣಪನಿಂದ ಮಾಲಿನ್ಯವಿಲ್ಲ
ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಬಣ್ಣದ ಪೇಂಟಿಂಗ್ ಗಳಿಂದ ನಿರ್ಮಾಣಗೊಂಡ ಗಣಪತಿ ವಿಗ್ರಹದಿಂದ ಪರಿಸರ ನೀರಿನ ಮೂಲಗಳ ಮಾಲಿನ್ಯವಾಗುತ್ತದೆ. ಆದರೆ ಯಾವುದೇ ಪರಿಸರ ಮಾಲಿನ್ಯಕ್ಕೆ ಅವಕಾಶವಿಲ್ಲದ ಈ ಕಲಾಕೃತಿ ಇನ್ನಷ್ಟು ಮಂದಿ ಪ್ರೇರಣೆಯಾಗಬೇಕು ಎನ್ನುತ್ತಾರೆ ಎಂ.ಡಿ ಮನೋಹರ್ ಶೆಟ್ಟಿ

ಒಂದು ವಾರ ಕಾಲ ವೀಕ್ಷಣೆಗೆ
ಈ ಕಲಾಕೃತಿ ಮುಂದಿನ ಒಂದು ವಾರಗಳ ಕಾಲ ಸಾಯಿರಾಧಾ ಟಿವಿಎಸ್ ಶೋರೂಂ ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ವಿಶೇಷ ಗಣಪ
ಈ ಹಿಂದೆಯೂ ದೇಶದ ಹಲವು ಭಾಗಗಳಲ್ಲಿ ಬಿಸ್ಕೆಟ್ ನಿಂದ ಗಣಪತಿಗಳನ್ನು ತಯಾರಿಸಲಾಗಿತ್ತು. ಈ ಗಣಪತಿಯನ್ನು ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಉಡುಪಿಯಲ್ಲಿ ರಚಿಸಿರುವುದು ವಿಶೇಷ.












Click it and Unblock the Notifications