ಮೃತ್ಯುಂಜಯ ಹೋಮ ಮಾಡಲು ಮುಂದಾಗಿದ್ದ ಅಂಬರೀಷ್ ಗೆ ಮೃತ್ಯು ಕಾಡಿತು
Recommended Video

ಉಡುಪಿ, ನವೆಂಬರ್ 26: ಇಲ್ಲಿನ ಕಾಪುವಿನ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಅವರು ನಟ ಅಂಬರೀಷ್ ಅವರ ಬಗ್ಗೆ ಜತೆಗಿನ ಮಾತುಕತೆ, ಮೃತ್ಯು ಕಟಂಕ ನಿವಾರಣೆಗೆ ಯತ್ನಿಸಿ ಪೂಜೆ ಕೈಗೊಳ್ಳಲು ಮುಂದಾಗಿದ್ದರ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
'ತಾನೊಂದು ಬಗೆದರೆ ಮಾನವ, ಬೇರೊಂದು ಬಗೆದಿತು ದೈವ ಎಂಬಂತೆ' ಒರಟು ಮಾತಿನಲ್ಲೂ ಸಜ್ಜನಿಕೆಯ ಮೂರ್ತಿಯಂತಿದ್ದ ಅಂಬರೀಷ್ ಅವರನ್ನು ಉಳಿಸಿಕೊಳ್ಳುವ ಭಾಗ್ಯ ನಮಗೆ ಇಲ್ಲದ್ದಂತಾಯಿತು ಎಂದು ಪ್ರಕಾಶ್ ಅವರು ದುಃಖ ತೋಡಿಕೊಂಡಿದ್ದಾರೆ.
In Pics : 'ದಿಗ್ಗಜ'ನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿರುವ ಚಿತ್ರರಂಗ
ನಟ ಅಂಬರೀಶ್ ಅವರಿಗೆ ಮೃತ್ಯುಂಜಯ ಹೋಮ ಹಾಗೂ ಆಶ್ಲೇಷಾ ಬಲಿ ಪೂಜೆ ನಡೆಸಲು ಸೂಚನೆ ನೀಡಿದ್ದೆ. ಆದರೆ, ಅದಕ್ಕೆ ಕಾಲ ಕೂಡಿ ಬರಲೇ ಇಲ್ಲ. ಅಂಥ ದಿವ್ಯಾತ್ಮಕ್ಕೆ ಪುಣ್ಯಲೋಕ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಅಂಬರೀಷ್ ಅವರ ಅನಾರೋಗ್ಯದ ಬಗ್ಗೆ ಚಿಂತಿತರಾಗಿದ್ದ ಅವರ ಆಪ್ತ ವಲಯದ ಪೈಕಿ ನಟ ದೊಡ್ಡಣ್ಣ ಅವರು ಅಂಬರೀಷ್ ಜಾತಕ ಹಿಡಿದುಕೊಂಡು ಪ್ರಮುಖ ಜ್ಯೋತಿಷಿಗಳಿಗೆ ತೋರಿಸಿದ್ದಾರೆ. ಅದರಂತೆ ಪ್ರಕಾಶ್ ಅಮ್ಮಣ್ಣಾಯ ಅವರಿಗೆ ಅಂಬರೀಷ್ ಜಾತಕ ತಲುಪಿದೆ, ಇದಾದ ಬಳಿಕ ಏನಾಯ್ತು ಮುಂದೆ ಓದಿ..

ಮೊದಲ ಬಾರಿಗೆ ಫೋನ್ ಮಾಡಿದ ಕ್ಷಣ
ಇದಕ್ಕೇ ಹೇಳುವುದು ನಾವು ನಿಮಿತ್ತ ಮಾತ್ರ ಎಂದು. ಅಕ್ಟೋಬರ್ 10ರಂದು ಅಂಬರೀಶ್ ಅವರೊಡನೆ ಪ್ರಥಮ ಬಾರಿ ಫೋನಿನಲ್ಲಿ ಸಂಭಾಷಣೆ ಮಾಡಿದ್ದೆ. ದೊಡ್ಡಣ್ಣ ಅವರ ಮೂಲಕ ಪರಿಚಯವಾಯಿತು. ಜಾತಕ ನೋಡಿ, ಲಗ್ನಾಷ್ಟಮದಲ್ಲಿ ಶನಿಸಂಚಾರ ಕಾಲ, ದಶಾಧಿಪತಿ ಬುಧನಿಗೆ ಚತುರ್ಥದಲ್ಲಿ ಕೇತು ಇರುವುದು ಅಪಾಯ ಎಂದು ತಿಳಿದು ಬಂದಿತು ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಬರೆದುಕೊಂಡಿದ್ದಾರೆ.

ಮೃತ್ಯುಂಜಯ ಹೋಮ ಮಾಡಬೇಕಿತ್ತು
ಅಂಬರೀಷ್ ಅವರಿಗೆ ಮೃತ್ಯುಂಜಯ ಹೋಮ ಮತ್ತು ಆಶ್ಲೇಷಬಲಿ ಮಾಡಲು ಸೂಚಿಸಿದ್ದೆ. ಆ ಪ್ರಕಾರ ದಿನಾಂಕ 12ರಂದು ನನ್ನ ಮೂಲಕವೇ ಮಾಡುವುದೆಂದೂ ದಿನ ನಿಗದಿಯೂ ಆಯಿತು.
ಆದರೆ, ಆ ದಿನ ಬೆಂಗಳೂರಲ್ಲಿ ನನಗೆ ಜ್ವರ ಬಂದು ಆರೋಗ್ಯವೂ ಕೈ ಕೊಟ್ಟಿತು. ಆದರೂ ಮಾಡೇ ಬಿಡೋಣ ಅಂತ ನನ್ನ ಜತೆ ಬಂದಿದ್ದ ಪುರೋಹಿತರು ಹೇಳಿಯೂ ಇದ್ದರು.

ಅನಂತ್ ಕುಮಾರ್ ನಿಧನದ ದಿನ ಮುಹೂರ್ತ
ಈ ಸಮಯದಲ್ಲಿ ಮಾನ್ಯ ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತ್ಯಕ್ರಿಯೆಯ ಕಾರಣ, ಮುಂದಿನ ಸಲ ಮಾಡೋಣ ಎಂದು ಅಂಬರೀಶ್ ಹೇಳಿದರು. ನಾನೂ ಇದೂ ಹೌದು ಎಂದು ಸುಮ್ಮನಾದೆ. ಈ ನಂತರ ಯಾವಾಗ ಮಾಡೋಣ ಎಂದು ಮತ್ತೆ ಕೇಳಿದ್ದರು. ನಾನು ಇನ್ನೂ ದಿನಾಂಕ ಕೊಡದೆ ಮುಂದೆ ಹಾಕಿದ್ದೆ. ಆದರೆ, ಪೂಜೆ ಮಾಡಿಸುವ ಯೋಗ ನಮಗೆ ಇಲ್ಲದ್ದಂತಾಯಿತು.

ಈಗ ನಮ್ಮ ನೆಚ್ಚಿನ ಅಂಬರೀಶ್ ಇನ್ನಿಲ್ಲ
ಈಗ ನಮ್ಮ ನೆಚ್ಚಿನ ಅಂಬರೀಶ್ ಇನ್ನಿಲ್ಲ. ಇದನ್ನೇ ದೈವ ಚಿತ್ತ ಎನ್ನುವುದು. ನಾನೇನೂ ಜೀವ ಉಳಿಸುವವನಲ್ಲ. ಆದರೆ ಭಕ್ತಿಶ್ರದ್ಧೆಯಿಂದ ಮಾಡುವ ಆ ಹೋಮ ಪೂಜೆಗಳಿಗೆ ಆ ಶಕ್ತಿ ಇತ್ತು. ಹಾಗಾಗಿ ಆಯುಷ್ಯ ಮುಗಿದಿದ್ದಾಗ ಪೂಜೆ ಮಾಡುವ ಯೋಗ ಬರಲಿಲ್ಲ.
ಅಂತೂ ಸಜ್ಜನರೊಬ್ಬರನ್ನು ಕಳೆದುಕೊಂಡ ದುಃಖವು ನನಗಿದೆ. ಹಾಗಾಗಿ ಇದನ್ನು ಬರೆಯಬೇಕೆಂದೆನಿಸಿತು. ಸಜ್ಜನರನ್ನು ಉಳಿಸಿಕೊಳ್ಳುವ ಯೋಗಭಾಗ್ಯವು ನಮಗೂ ಬೇಕು. ಅದು ಇಲ್ಲದಂತಾಯಿತು. ಅವರ ದಿವ್ಯಾತ್ಮಕ್ಕೆ ಅಕ್ಷಯ ಪುಣ್ಯಲೋಕ ಸಿಗಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ ಎಂದು ಬರೆದುಕೊಂಡಿದ್ದಾರೆ.

ನಟ ಜಗ್ಗೇಶ್ ಕೂಡಾ ಹೋಮದ ಬಗ್ಗೆ ಮಾತಾಡಿದ್ರು
ತಮಿಳುನಾಡಿನಲ್ಲಿ ನವಗ್ರಹ ಪೂಜೆ, ಯಾತ್ರೆಗೆ ನಾನು ನನ್ನ ಪತ್ನಿ ಹೊರಟ್ಟಿದ್ವಿ ಸುದ್ದಿ ಸಿಕ್ಕಿತು ಇಲ್ಲಿಗೆ ಬಂದ್ವಿ.
ನಮ್ಮ ಗುರುಗಳು ಪ್ರಕಾಶ್ ಅಮ್ಮಣ್ಣಾಯ ಅಂತಾ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ದೊಡ್ಡಣ್ಣ ಅವರು ಜ್ಯೋತಿಷಿಗಳು, ಆಯುಷ್ಯ ಹೋಮ ಆಗಬೇಕು ಎಂದು ನ.12ಕ್ಕೆ ಫಿಕ್ಸ್ ಮಾಡಿದ್ರು. ಅನಂತ್ ಕುಮಾರ್ ಅವರ ನಿಧನದಿಂದ ಮುಂದೂಡಿದ್ವಿ. ಮುರ್ನಾಲ್ಕು ದಿನಗಳಲ್ಲಿ ಮಾಡೋಣ ಎಂದಿದ್ರು, ಆದರೆ, ಎಲ್ಲವೂ ಬ್ರಹ್ಮ ಲಿಖಿತ ಎಂದು ಹೇಳಿದರು.












Click it and Unblock the Notifications