Udupi Gang War: ತಾವೇ ಪೊಲೀಸರಿಗೆ ಶರಣಾದ ಮೂವರು ಆರೋಪಿಗಳು; ಯಾಕೆ..?
ಉಡುಪಿ, ಮೇ 27: ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡುರಾತ್ರಿ ನಡೆದ ಗ್ಯಾಂಗ್ ವಾರ್ ಪ್ರಕರಣ ಸಂಬಂಧ ಮತ್ತೆ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಗರುಡ ಗ್ಯಾಂಗ್ನ ಮಜೀದ್, ಅಲ್ಫಾಜ್ ಹಾಗೂ ಶರೀಫ್ ಬಂಧಿತ ಆರೋಪಿಗಳು.
ಮೇ 18ರಂದು ಬೆಳಗಿನ ಜಾವ 2ಗಂಟೆಯ ಹೊತ್ತಿಗೆ ನಡು ರಸ್ತೆಯಲ್ಲಿ ಒಂದೇ ಗುಂಪಿನ ಎರಡು ತಂಡಗಳು ಪರಸ್ಪರ ಲಾಂಗ್, ಮಚ್ಚು ಬೀಸಿ ಬಡಿದಾಡಿಕೊಂಡ ಘಟನೆ ಉಡುಪಿ ನಗರದ ಕುಂಜಿಬೆಟ್ಟುವಿನಲ್ಲಿ ನಡೆದಿತ್ತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಪ್ರಕರಣ ಸಂಬಂಧ ಮೊದಲು ಆಶಿಕ್, ರಾಕೀಬ್, ಸಕ್ಲೈನ್ ಎನ್ನುವಾತನನ್ನು ಉಡುಪಿ ಪೊಲೀಸರು ಬಂಧಿಸಿದ್ದರು.

ಘಟನೆಯ ಗಂಭೀರತೆ ಮತ್ತು ಸಾರ್ವಜನಿಕರ ಆಗ್ರಹದ ಮೇಲೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಪೊಲೀಸರ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಮಜೀದ್, ಅಲ್ಫಾಜ್ ಹಾಗೂ ಶರೀಫ್ ತಾವಾಗಿಯೇ ಬಂದು ಕಾಪು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಕೂಡಲೇ ಮೂವರು ಆರೋಪಿಗಳನ್ನು ಬಂಧಿಸಿದ ಕಾಪು ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿ ಉಡುಪಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು..?
ಉಡುಪಿಯ ಕಾಪುವಿನಲ್ಲಿ ಟೀಂ ಗರುಡ ಹೆಸರಿನಲ್ಲಿ ತಂಡ ಕಟ್ಟಿಕೊಂಡಿದ್ದ ಪುಂಡರ ಗುಂಪೊಂದು ಗಾಂಜಾ, ದನ ಕಳ್ಳತನ, ದರೋಡೆಯಲ್ಲಿ ಸಕ್ರಿಯವಾಗಿತ್ತು. ಸದಾ ತಲವಾರು, ಕತ್ತಿ, ಡ್ರ್ಯಾಗನ್ ಹಿಡಿದು ತಿರುಗಾಡುತ್ತಿದ್ದ ಈ ಗುಂಪಿಗೆ ರೌಡಿಶೀಟರ್ ಆಶಿಕ್ ಎಂಬಾತನೇ ಕ್ಯಾಪ್ಟನ್ ಆಗಿದ್ದ. ನಾಲ್ಕು ವರ್ಷದ ಹಿಂದೆ ಅಂದಿನ ಎಸ್.ಪಿ ಡಾ. ವಿಷ್ಣುವರ್ಧನ್ ಈ ತಂಡದ ಹೆಡೆಮುರಿ ಕಟ್ಟಿದ್ದರು. ಅದಾದ ನಂತರ ಈ ತಂಡದ ಒಳಜಗಳ ಹೆಚ್ಚಾಗಿತ್ತು.

ಎರಡು ವಾರದ ಹಿಂದೆ ಆಶಿಕ್ ಮತ್ತು ಅಲ್ಫಾಝ್ ನಡುವೆ ಜಗಳ ನಡೆದಿತ್ತು. ಒಂದೇ ತಂಡ ಆಗಿರುವುದರಿಂದ ರಾಜಿ ಆಗಲು ಆಶಿಕ್ನನ್ನು ಅಲ್ಫಾಝ್ ಟೀಂ ಕರೆಸಿಕೊಂಡಿತ್ತು. ಆದರೆ ಅಲ್ಫಾಝ್ ಬಗ್ಗೆ ತಿಳಿದಿದ್ದ ಆಶಿಕ್ ಕುಂಜಿಬೆಟ್ಟಿಗೆ ಬಂದವನೇ ಕಾರಿನಿಂದ ಇಳಿದಿರಲಿಲ್ಲ. ಹೀಗಾಗಿ ಕಾರು ಗುದ್ದಾಟದ ಮೂಲಕ ಆಶಿಕ್ನನ್ನ ಮಟ್ಟ ಹಾಕಲು ಅಲ್ಫಾಝ್ ಪ್ರಯತ್ನಿಸಿದ್ದಾನೆ. ಅಷ್ಟೇ ಅಲ್ಲ, ತಲವಾರು ದಾಳಿ ನಡೆಸಲು ಮುಂದಾಗಿದ್ದಾರೆ. ಇಷ್ಟಾಗುತ್ತಲೇ ಆಶಿಕ್ ಕಡೆಯವರು ತಮ್ಮ ಸ್ವಿಫ್ಟ್ ಕಾರನ್ನು ಶರೀಫ್ ಎಂಬಾತನ ಮೇಲೆ ಹರಿಸಿದ್ದಾರೆ. ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸದ್ಯ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications