ಫೆ.1ರಿಂದ ಪೊಲೀಸರ ಖಾತೆಗೆ ವಿಶೇಷ ಭತ್ಯೆ : ಪರಮೇಶ್ವರ್
ಉಡುಪಿ, ಜನವರಿ. 14 : ಫೆಬ್ರವರಿ 1ರಂದು ನೀಡುವ ಸಂಬಳದ ಜತೆಗೆ 2,000ರೂ. ವಿಶೇಷ ಭತ್ಯೆಯನ್ನು ನೀಡಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶುಕ್ರವಾರ ಗಂಗೊಳ್ಳಿ ಮೀನುಗಾರಿಕಾ ಬಂದರು ಸಮೀಪ ನಿರ್ಮಿಸಲಾದ ಕರಾವಳಿ ಕಾವಲು ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರದ್ದು ಅತ್ಯಂತ ಕಷ್ಟದ ಕೆಲಸ. ತೀವ್ರವಾದ ಒತ್ತಡದಲ್ಲಿ ಅವರು ಕೆಲಸ ಮಾಡುತ್ತಾರೆ. ಅವರಿಗೆ ಒಂದಿಷ್ಟು ಸವಲತ್ತು ನೀಡುವುದರಲ್ಲಿ ಯಾವುದೇ ತಪ್ಪಿಲ್ಲ.
ರಾಜ್ಯದಲ್ಲಿ 2013ರಿಂದ ಅವರಿಗೆ ಯಾವುದೇ ಭತ್ಯೆ ನೀಡಿಲ್ಲ. ಹೀಗಾಗಿ ಅವರಿಗೆ ಔರಾದ್ ಕರ್ ಸಮಿತಿ ಶಿಫಾರಸ್ಸು ಮಾಡಿದಂತೆ ಸಮವಸ್ತ್ರ ಭತ್ಯೆ, ರಿಸ್ಕ್ ಅಲಾಯೆನ್ಸ್ ಸೇರಿದಂತೆ ಒಟ್ಟು 2000ರೂ. ಭತ್ಯೆಯನ್ನು ನೀಡಲು ನಿರ್ಧರಿಸಲಾಗಿದೆ.
ಇದನ್ನು ಜನವರಿಯಿಂದಲೇ ನೀಡಲು ನಿರ್ಧರಿಸಲಾಗಿತ್ತು. ಆದರೆ, ಕೆಲವು ಕಾರಣಗಳಿಂದ ಸಾಧ್ಯವಾಗದ್ದರಿಂದ ಫೆ.1ರ ವೇತನದ ಜತೆಗೆ ಅದನ್ನು ಸೇರಿಸಿ ನೀಡಲು ನಿರ್ಧರಿಸಲಾಗಿದೆ ಎಂದರು.
2017ರಲ್ಲಿ ಹೊಸ ವೇತನ ಆಯೋಗ ರಚನೆಯಾಗಲಿದೆ. ರಾಜ್ಯದಲ್ಲಿ ಪೊಲೀಸರ ವೇತನ ಹೆಚ್ಚಳ ಕುರಿತಂತೆ ನೇಮಿಸಲಾದ ಔರಾದ್ಕರ್ ಸಮಿತಿ ಇತರ ರಾಜ್ಯಗಳ ಪೊಲೀಸರ ವೇತನಗಳನ್ನು ಪರಿಶೀಲಿಸಿ ನೀಡಿರುವ ವರದಿಯ ಶಿಪಾರಸ್ಸುಗಳನ್ನು ವೇತನ ಆಯೋಗದ ಮುಂದುವರಿಸಲಾಗುವುದು. ಅಂತಿಮವಾಗಿ ಆಯೋಗ ನೀಡುವ ಶಿಫಾರಸ್ಸುಗಳನ್ನು ಸರಕಾರ ಜಾರಿಗೊಳಿಸಲಿದೆ ಎಂದು ಪರಮೇಶ್ವರ್ ತಿಳಿಸಿದರು.
ರಾಜ್ಯದ ಪೊಲೀಸ್ ಇಲಾಖೆ ಶಿಸ್ತಿಗೆ ಹೆಸರಾಗಿದ್ದು, ಯಾವುದೇ ಕಾರಣಕ್ಕೂ ಪೊಲೀಸರ ಶಿಸ್ತು ಉಲ್ಲಂಘನೆ ಸಲ್ಲದು. ಪೊಲೀಸ್ ಸಿಬ್ಬಂದಿಯ ಎಲ್ಲಾ ರೀತಿಯ ಮನವಿಗಳಿಗೆ ಸೂಕ್ತವಾಗಿ ಸ್ಪಂದಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ರಾಜ್ಯದಲ್ಲಿ 25,000 ಪೊಲೀಸ್ ಸಿಬ್ಬಂದಿ ಹುದ್ದೆ ಖಾಲಿ ಇತ್ತು. ತಮ್ಮ ಸರಕಾರ ಬಂದ ನಂತರ ಒಂದೂವರೆ ವರ್ಷದಲ್ಲಿ 20,000 ಕಾನ್ಸ್ ಟೇಬಲ್ ಗಳ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ 16,000 ಕಾನ್ಸ್ ಟೇಬಲ್ ನೇಮಕಾತಿ ಮುಗಿದಿದೆ. 1,000 ಎಸ್ಐಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಕಂದಾಯ ಇಲಾಖೆಯಲ್ಲಿ ಎರಡನೇ ದರ್ಜೆ ಗುಮಾಸ್ತನಾಗಿ ಸೇರುವಾತ 22 ವರ್ಷಗಳಲ್ಲಿ ಮೂರು ಬಡ್ತಿಗಳನ್ನು ಪಡೆದು ತಹಶೀಲ್ದಾರ್ ಆಗುವ ಅವಕಾಶ ಪಡೆದರೆ,
ಪೊಲೀಸ್ ಇಲಾಖೆಗೆ ಕಾನ್ಸ್ಟೇಬಲ್ ಆಗಿ ಸೇರಿದವರು 22 ವರ್ಷದ ಬಳಿಕ ಹೆಡ್ಕಾನ್ಸ್ಟೇಬಲ್ ಆಗಿ ಬಡ್ತಿ ಪಡೆಯುವ ಕ್ರಮವನ್ನು ನಮ್ಮ ಸರಕಾರ ಬದಲಾಯಿಸಿದ್ದು, ಇನ್ನು 10 ವರ್ಷಗಳಿಗೆ ಹೆಡ್ಕಾನ್ಸ್ಟೇಬಲ್ ಆಗಲಿದ್ದಾರೆ.
ಅವಕಾಶವಿದ್ದರೆ, ಇನ್ನು ಮುಂದೆ ತನ್ನ ಸರ್ವಿಸ್ನಲ್ಲಿ ಆತ ಸರ್ಕಲ್ ಇನ್ಸ್ಪೆಕ್ಟರ್ ಆಗಿ ನಿವೃತ್ತಿ ಪಡೆಯಲೂ ಬಹುವುದು. ಒಂದು ವೇಳೆ ಬಡ್ತಿ ದೊರೆಯದಿದ್ದರೂ, ಆ ಶ್ರೇಣಿಯ ವೇತನ ಆತನಿಗೆ ದೊರೆಯುವಂತೆ ನಿಯಮವನ್ನು ಮಾರ್ಪಾಡು ಮಾಡಲಾಗಿದೆ ಎಂದು ಡಾ.ಪರಮೇಶ್ವರ್ ತಿಳಿಸಿದರು.