ಗುಡ್ ಫ್ರೈಡೇ ದಿನ 'ಗುಡ್ ನ್ಯೂಸ್' ಹೇಳಿದ ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಏಪ್ರಿಲ್ 10: ಶುಭ ಶುಕ್ರವಾರದ ದಿನ ಉಡುಪಿ ಜಿಲ್ಲೆಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಶುಭ ಸುದ್ದಿಯನ್ನು ನೀಡಿದ್ದಾರೆ. ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಡಿಸಿ, "ಜಿಲ್ಲೆಯ ಎಲ್ಲಾ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ" ಎಂದು ಹೇಳಿದ್ದಾರೆ.
"ಜಿಲ್ಲೆಯಲ್ಲಿ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಅವರೆಲ್ಲರೂ ಗುಣಮುಖರಾಗಿದ್ದಾರೆ" ಎಂದು ಡಿಸಿ ಜಗದೀಶ್ ಹೇಳಿದ್ದಾರೆ.
"ದಾಖಲಾಗಿದ್ದ ಮೂವರಿಗೂ ಪ್ರೈಮರಿ ಮತ್ತು ಸೆಕೆಂಡರಿ ಕ್ವಾಂಟ್ಯಾಕ್ಟ್ ಗಳು ಬಂದಿದ್ದವು. ಅವರೆಲ್ಲರನ್ನೂ ಸರಕಾರೀ ವಶದಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಲಾಗಿತ್ತು. ಈಗ ಅವರೆಲ್ಲರದ್ದೂ ನೆಗೆಟೀವ್ ಬಂದಿದೆ".

"ಇದರಿಂದಾಗಿ ನಮಗಿದ್ದ ದೊಡ್ಡ ಆತಂಕ ದೂರವಾಗಿದೆ. ಇನ್ನು ಕೊರೊನಾ ಬರುವ ಸಾಧ್ಯತೆ ತುಂಬಾ ಕಮ್ಮಿಯಿದೆ. ಆದರೆ, ಹೊರಗಡೆಯಿಂದ ಜನರು ಜಿಲ್ಲೆಗೆ ಬರುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಹಾಗಾಗಿ, ಸದ್ಯಕ್ಕೆ ಜಿಲ್ಲೆಯ ಗಡಿಯನ್ನು ಸೀಲ್ ಮಾಡಲಾಗಿದೆ" ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
'ಮುಂದಿನ ಕೆಲವು ದಿನ, ಜಿಲ್ಲೆಯಿಂದ ಯಾರೂ ಹೊರಗೆ ಹೋಗುವಂತಿಲ್ಲ ಮತ್ತು ಜಿಲ್ಲೆಗೆ ಯಾರೂ ಬರುವಂತಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು" ಡಿಸಿ ಜಗದೀಶ್ ಮನವಿ ಮಾಡಿದ್ದಾರೆ.
"ಜನರು ಎಲ್ಲೆಲ್ಲಿ ಇದ್ದೀರೋ, ಅಲ್ಲೇ ಇರಿ. ನಮ್ಮ ಜಿಲ್ಲೆಗೆ ಯಾರನ್ನೂ ಒಳಗಡೆ ಬಿಡಲು ಸಾಧ್ಯವಿಲ್ಲ. ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವವರು ಸದ್ಯ ಉಡುಪಿ ಜಿಲ್ಲೆಗೆ ಬರಬೇಡಿ" ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.












Click it and Unblock the Notifications