ಅಘೋರಿಗಳ ಮಾಹಾಯಾಗಕ್ಕೆ ಸಾಕ್ಷಿಯಾದ ಉಡುಪಿಯ ತೊಟ್ಟಂ ಕಡಲಕಿನಾರೆ
ಉಡುಪಿ, ನವೆಂಬರ್ 15: ಮಲ್ಪೆಯ ಸಮೀಪದ ತೊಟ್ಟಂ ಕಡಲ ಕಿನಾರೆ ಅಘೋರಿಗಳ ಅಪರೂಪದ ಮಹಾಯಾಗಕ್ಕೆ ಸಾಕ್ಷಿಯಾಗಿದೆ. ಒಂಭತ್ತು ದಿನಗಳ ಮಹಾಯಾಗ ಅಘೋರಿಗಳಿಂದ ನಡೆಯುತ್ತಿದ್ದು, ಸಮಸ್ತ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿ ಅಕಾಲ ಮೃತ್ಯುಂಜಯ ಮಹಾಯಾಗ ನೆರವೇರಿಸಲಾಗುತ್ತಿದೆ.
ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದಿಂದ ಲೋಕಕ್ಕೆ ಅತಿವೃಷ್ಟಿ, ಅನಾವೃಷ್ಟಿ ಅಪಾಯ ತಪ್ಪಿಸಲು ಹಾಗೂ ಲೋಕ ಸುಭಿಕ್ಷೆಯಿಂದ ಕೂಡಿರುವಂತೆ ಪ್ರಾರ್ಥಿಸಿ ಮಾಡಲಾಗುತ್ತಿರುವ ಮಹಾಯಾಗ ಇದಾಗಿದೆ ಎಂದು ಹೇಳಲಾಗುತ್ತಿದೆ. ಸದಾ ಸಂಚಾರದಲ್ಲಿರುವ ಅಘೋರಿಗಳು ಇದ್ದಲ್ಲಿಯೇ ಕೈಗೊಳ್ಳುವ ಸಂಕಲ್ಪ ಮಹಾಯಾಗವಾಗಿದೆ.
ಹಿಮಾಲಯದ ದಕ್ಷಿಣ ಭಾರತಕ್ಕೆ ಆಗಮಿಸಿದ ಆಘೋರಿಗಳಿಂದ ಈ ಯಾಗ ನಡೆಯುತ್ತಿದ್ದು, ಅಪಾರ ಪ್ರಮಾಣದ ಅಮೃತ ಬಳ್ಳಿ, ಗರಿಕೆ , ತುಪ್ಪ ಸೇರಿದಂತೆ ಹಲವು ಬಗೆಯ ಸಮಿದೆಯನ್ನು ಯಾಗಕ್ಕೆ ಹವಿಸ್ಸಾಗಿ ಬಳಕೆ ಮಾಡಲಾಗುತ್ತಿದೆ.
ಖಂಡಗ್ರಸ್ತ ಸೂರ್ಯ ಗ್ರಹಣ, ರಕ್ತಚಂದನ ಚಂದ್ರಗ್ರಹಣದಿಂದ ಲೋಕಕ್ಕೆ ಅತಿವೃಷ್ಟಿ, ಅನಾವೃಷ್ಟಿ, ವಿಪತ್ತು ಸಂಭವಿಸದೆ ಲೋಕ ಸುಭಿಕ್ಷೆಯಿಂದ ಕೂಡಿರುವಂತೆ ಯಾಗ ದ ಸಂದರ್ಭದಲ್ಲಿ ಪ್ರಾರ್ಥನೆ ಮಾಡಲಾಗುತ್ತಿದೆ. ದೇಶದ ನಾನಾ ಭಾಗಗಳಲ್ಲಿ ಇದೇ ರೀತಿಯ ಮಹಾಯಾಗ ನಡೆಸಲಾಗುತ್ತಿದ್ದು, ಜನ ಸಂಪರ್ಕವಿಲ್ಲದೆ ಪ್ರತ್ಯೇಕವಾಗುಳಿದು ಅಕಾಲ ಮಹಾಯಾಗವನ್ನು ಮಾಡಲಾಗುತ್ತಿದೆ.

ಗೌಪ್ಯವಾಗಿ ನಡೆಯುತ್ತಿರುವ ಮಹಾಯಾಗ
ಸ್ಥಳೀಯರ ಸಂಪರ್ಕವಿಲ್ಲದೆ ಕೆಲವೇ ವ್ಯಕ್ತಿಗಳ ಸಹಕಾರದೊಂದಿಗೆ ಅತ್ಯಂತ ಗೌಪ್ಯವಾಗಿ ಈ ಯಾಗ ಮಾಡಲಾಗುತ್ತಿದೆ. ಸತತ 9 ದಿನಗಳ ಕಾಲ ಈ ಯಾಗ ಮುಂದುವರಿಯಲಿದೆ. ಏಕಕಾಲದಲ್ಲಿ ಎರಡು ಗ್ರಹಣಗಳು ಬಂದ ಸಂದರ್ಭದಲ್ಲಿ, ಪ್ರಾಕೃತಿಕ ವಿಕೋಪಗಳು ಸಂಭವಿಸುವ ಅಪಾಯ ಹೆಚ್ಚು ಎಂದು ಹೇಳಲಾಗುತ್ತದೆ. ಅದಕ್ಕೆ ಪೂರಕವೋ ಎಂಬಂತೆ ವಿಶ್ವದ ನಾನಾ ಭಾಗಗಳಲ್ಲಿ ಗ್ರಹಣದ ನಂತರ ಭೂಕಂಪಗಳು ಕೂಡ ಸಂಭವಿಸಿವೆ. ಹಾಗಾಗಿ, ದೇಶದಲ್ಲಿ ಯಾವುದೇ ದೊಡ್ಡ ಹಾನಿ ಸಂಭವಿಸಬಾರದು ಎಂಬ ಉದ್ದೇಶದಿಂದ ಅಘೋರಿಗಳು ಕಡಲ ತೀರದಲ್ಲಿ ಅಕಾಲ ಮೃತ್ಯುಂಜಯ ಮಹಾಯಾಗ ನೆರವೇರಿಸುತ್ತಿದ್ದಾರೆ.
ದೇಶದ ಅನೇಕ ಭಾಗಗಳಲ್ಲಿ ಅಘೋರಿಗಳು ಯಾಗ ನಿರತರಾಗಿದ್ದಾರೆ. ಗುರುವಾರ ಈ ಮಹಾಯಾಗ ಕೊನೆಯ ದಿನವಾಗಿದ್ದು ಈ ಯಾಗದಲ್ಲಿ ಮತ್ತಷ್ಟು ಅಘೋರಿಗಳು ಭಾಗಿಯಾಗುವಂತಹ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.












Click it and Unblock the Notifications