ಬ್ಯಾರಿಕೇಡ್ ಮೇಲೆಯೇ ನುಗ್ಗಿದ ವಾಹನ: ಕೂದಲೆಳೆಯಲ್ಲಿ ಪಾರಾದ ಯೋಧರು
Recommended Video

ಮಂಗಳೂರು, ಮೇ 1: ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರು ಸಾವಿನ ದವಡೆಯಿಂದ ಸಿನಿಮೀಯ ರೀತಿಯಲ್ಲಿ ಕೂದಲೆಳೆಯಲ್ಲಿ ಪಾರಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರ ಸಂಜೆ ರಸ್ತೆಬದಿ ಬ್ಯಾರಿಕೇಡ್ಗಳನ್ನು ಅಳವಡಿಸಿ ವಾಹನ ತಪಾಸಣೆ ನಡೆಸುತ್ತಿದ್ದ ಯೋಧರ ಸಮೀಪದಲ್ಲೇ ಸಾವು ಹಾದುಹೋಗಿದೆ. ಉಡುಪಿ ಜಿಲ್ಲೆ ಪೂರ್ವದ ಗಡಿಯಲ್ಲಿನ ಹೆಬ್ರಿ ಸಮೀಪದ ಸೋಮೇಶ್ವರದಲ್ಲಿ ನಡೆದ ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೈಜುಮ್ಮೆನಿಸುವ ಈ ದೃಶ್ಯಾವಳಿ ಅರೆಕ್ಷಣ ಹೃದಯವನ್ನು ನಡುಗಿಸುತ್ತದೆ. ಅಷ್ಟೇ ಸಿನಿಮೀಯವೂ ಆಗಿದೆ. ಅತಿಯಾದ ವೇಗದಲ್ಲಿ ಬಂದ ಟೆಂಪೊ ಟ್ರಾವೆಲರ್, ಬ್ಯಾರಿಕೇಡ್ಗಳನ್ನು ಲೆಕ್ಕಿಸದೆ ಡಿಕ್ಕಿ ಹೊಡೆದು ಅವುಗಳ ಮೇಲೆಯೇ ಹಾದು ಹೋಗಿದೆ.

ಚುನಾವಣೆ ಕಾರಣಕ್ಕೆ ಇಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ಪೊಲೀಸರು ಮತ್ತು ಯೋಧರ ತಂಡ ಉರಿ ಬಿಸಿಲಲ್ಲಿ ಕಾವಲು ಕಾಯುತ್ತಿದ್ದರು. ಸಂಜೆ ನಾಲ್ಕರ ಸುಮಾರಿಗೆ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ನುಗ್ಗಿದ ಟೆಂಪೊ ಟ್ರಾವೆಲರ್, ಎದುರಿಗಿದ್ದ ಮೂರು ಬ್ಯಾರಿಕೇಡ್ ಗಳನ್ನು ಉಡಾಯಿಸಿದೆ. ತಪಾಸಣೆ ನಡೆಸುತ್ತಿದ್ದ ಪೊಲೀಸರು ಮತ್ತು ಯೋಧರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಸಾಲಾಗಿ ನಿಂತಿದ್ದ ಕಾರುಗಳು ಎಡಬಲಕ್ಕೆ ಹೋಗಿ ಬಚಾವಾಗಿವೆ. ಎಲ್ಲವೂ ಅರೆಕ್ಷಣದಲ್ಲಿ ಮುಗಿದು ಹೋಗಿದೆ. ಇಷ್ಟಾದರೂ ಆ ಟೆಂಪೊ ಟ್ರಾವಲರ್ ನಿಲ್ಲಿಸಲಿಲ್ಲ. ಕ್ಷಣಮಾತ್ರದಲ್ಲಿ ನಡೆದುಹೋದ ಘಟನೆ ಅಲ್ಲಿದ್ದ ಜನ ಹಾಗೂ ಭದ್ರತಾ ಸಿಬ್ಬಂದಿಯನ್ನು ಅವಕ್ಕಾಗಿಸಿತು.
ಯಾಕೆ ಹೀಗಾಯಿತು?
ಹಾಸನದ ಕಡೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಟೆಂಪೊ ಟ್ರಾವೆಲರ್ ವಾಹನದ ಬ್ರೇಕ್ ಇಳಿಜಾರಿನಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಗಾಡಿ ನಿಲ್ಲಿಸಲಾಗಿಲ್ಲ. ಆದರೂ ಚಾಲಕ ಸಮಯಪ್ರಜ್ಞೆ ಮೆರೆದು ಸಂಭಾವ್ಯ ಅಪಾಯ ತಪ್ಪಿಸಿದ್ದಾನೆ. ಒಂದಿಷ್ಟು ದೂರ ಹೋಗಿ ಗಾಡಿ ನಿಲ್ಲಿಸಿದ್ದಾನೆ. ಅದೃಷ್ಟವಷಾತ್ ವಾಹನದಲ್ಲಿ ಇದ್ದವರಿಗಾಗಲೀ, ಭದ್ರತಾ ಸಿಬಂದಿಗಾಗಲೀ ಯಾವುದೇ ಅಪಾಯವಾಗಿಲ್ಲ.












Click it and Unblock the Notifications