ಅಂತೂ ಇಂತೂ ಉಡುಪಿಯ ಚಿರತೆ ಬೋನಿಗೆ ಬಿತ್ತು!
ಉಡುಪಿ ಜಿಲ್ಲೆ ಮರ್ಣೆ ಗ್ರಾಮದಲ್ಲಿ ಹಲವು ದಿನಗಳಿಂದ ಜನರ ನಿದ್ದೆ ಕೆಡಿಸಿದ್ದ ಚಿರತೆಯೊಂದು ಕೊನೆಗೂ ಬೋನಿಗೆ ಬೀಳುವ ಮೂಲಕ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಉಡುಪಿ, ಏಪ್ರಿಲ್ 11: ಉಡುಪಿ ನಗರದಿಂದ 15 ಕಿ ಮೀ ದೂರವಿರುವ ಮರ್ಣೆ ಗ್ರಾಮದ ಗುಂಡುಪಾದೆ ಕುಕ್ಕು ಪಲ್ಕೆ ಎಂಬಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಹೆಣ್ಣು ಚಿರತೆಯೊಂದು ಸೆರೆಯಾಗಿದೆ.
ಇತ್ತೀಚೆಗೆ ಈ ಪ್ರದೇಶದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿತ್ತಲ್ಲದೆ, ವಾರದ ಹಿಂದಷ್ಟೇ ಗುಂಡುಪಾದೆ ಫಿಲೋಮಿನಾ ಎಂಬವರ ಸಾಕು ನಾಯಿ ಚಿರತೆಗೆ ಆಹಾರವಾಗಿತ್ತು. ಮಿತಿ ಮೀರಿದ ಚಿರತೆ ಹಾವಳಿಯಿಂದ ಜನರು ಒಂಟಿಯಾಗಿ ಮನೆಯಿಂದ ಹೊರಬರಲು ಹಿಂದೇಟು ಹಾಕುವ ಪರಿಸ್ಥಿತಿ ಇತ್ತು. [ರಾಜ್ಯದ ಎರಡು ಕಡೆ ಚಿರತೆ ದಾಳಿ: ರೈತನಿಗೆ ಗಾಯ, ಕರು ಸಾವು]
ಚಿರತೆ ಹಾವಳಿಯನ್ನು ತಹಬಂದಿಗೆ ತರುವುದಕ್ಕಾಗಿ ಅರಣ್ಯ ಇಲಾಖೆ 10 ದಿನಗಳ ಹಿಂದೆ ಫಿಲೋಮಿನಾ ಅವರ ಮನೆಯ ಪಕ್ಕದಲ್ಲಿ ಬೋನನ್ನು ತಂದಿಟ್ಟಿತ್ತು. ಬೊನಿನೊಳಗಿದ್ದ ನಾಯಿ ಮಾಂಸದ ಆಸೆಗೆ ಬಂದ ಚಿರತೆ ಸೆರೆಸಿಕ್ಕಿದ್ದು, ಚಿರತೆ ಪ್ರಕರಣ ಸುಖಾಂತ್ಯ ಕಂಡಿದೆ.

ಈ ಜಾಗದಲ್ಲಿ ಕಳೆದ ಎಂಟು ತಿಂಗಳಿನಲ್ಲಿ ಸೆರೆ ಸಿಕ್ಕ 3 ನೇ ಚಿರತೆ ಇದಾಗಿದೆ. ಕಳೆದ ಜನವರಿ 27 ರಂದು ಅರಣ್ಯ ಇಲಾಖೆ ಇಟ್ಟ ಬೋನಿಗೆ ಗಂಡು ಚಿರತೆ ಸೆರೆಯಾಗಿತ್ತು. ಆಗ ಎರಡು ಚಿರತೆಗಳು ಹಾಡ ಹಗಲೇ ನಿರ್ಭೀತಿಯಿಂದ ಘರ್ಜಿಸುತ್ತಾ ಜನರಲ್ಲಿ ಆತಂಕ ಸೃಷ್ಟಿಸಿದ್ದವು. ಇದೀಗ ಅದರ ಜೋಡಿ ಹೆಣ್ಣು ಚಿರತೆಯೂ ಸೆರೆಯಾಗಿರುವುದು ಸ್ಥಳೀಯರು ನಿಟ್ಟುಸಿರು ಬಿಡುವಂತೆ ಮಾಡಿದೆ. [ಜಂಗಲ್ ಡೈರಿ: ಪ್ರಾಣಿ ಜಗತ್ತಿನ ಉಳಿವು-ಅಳಿವಿನ ನಿತ್ಯ ಹೋರಾಟ ]
ಬೋನಿಗೆ ಬಿದ್ದ ಚಿರತೆಯನ್ನು ಉಡುಪಿಯಲ್ಲಿರುವ ಅರಣ್ಯ ಇಲಾಖೆಯ ಕಚೇರಿಗೆ ಕೊಂಡೊಯ್ಯಲಾಯಿತು.












Click it and Unblock the Notifications