ಕಾರ್ಯಕರ್ತನ ಮಾತಿಗೆ ಒಟ್ಟಿಗೆ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ಬಿಎಸ್ ವೈ-ಈಶು
ಗುಬ್ಬಿ, ಮೇ 18: ಬಿಜೆಪಿ ಮುಖಂಡರಿಂದ ಕಾರ್ಯಕರ್ತರು ನಿರೀಕ್ಷೆ ಮಾಡುವುದೇನು ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ರಾಜ್ಯ ನಾಯಕರು ಗುರುವಾರದಿಂದ ಆರಂಭಿಸಿದ ಪ್ರವಾಸದ ವೇಳೆ ಒಗ್ಗಟ್ಟು ಪ್ರದರ್ಶಿಸಲಾಯಿತು. ಅದು ಹೇಗೆ ಎಂಬುದು ಮತ್ತೂ ಆಸಕ್ತಿಕರವಾಗಿದೆ. ಅಂಥ ಆಸಕ್ತಿಕರ ಸಂಗತಿ ಏನು ಅಂತೀರಾ?
ಗುಬ್ಬಿಯಲ್ಲಿ ಜನ ಸಂಪರ್ಕ ಸಭೆ ನಡೆಯುತ್ತಿತ್ತು. ಆಗ ಪಕ್ಷದ ಕಾರ್ಯಕರ್ತರೊಬ್ಬರು ಬಿಎಸ್ ಯಡಿಯೂರಪ್ಪ ಹಾಗೂ ಕೆಎಸ್ ಈಶ್ವರಪ್ಪ ಮಧ್ಯೆ ಒಗ್ಗಟ್ಟಿದೆ-ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸಂದೇಶ ನೀಡಬೇಕು ಎಂದು ಮನವಿ ಮಾಡಿದರು. ಆಗ ಅದಕ್ಕೆ ಸ್ಪಂದಿಸಿದ ಇಬ್ಬರೂ ನಾಯಕರು ಎದ್ದು ನಿಂತು ಪರಸ್ಪರ ಕೈ ಹಿಡಿದು, ತಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಂಡರು.[ಒಟ್ಟಿಗೆ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ಬಿಎಸ್ ವೈ-ಈಶು]
ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಅಪಾರ ಸಂಖ್ಯೆಯ ಹರ್ಷೋದ್ಗಾರ ಮಾಡಿದರು. ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಇಬ್ಬರೂ ನಾಯಕರು ಅಂತರ ಕಾಯ್ದುಕೊಂಡಿದ್ದರು. ನಿರಂತರವಾಗಿ ಇಬ್ಬರೂ ಮುಖಂಡರ ಬಣದಿಂದ ಪರಸ್ಪರ ಕೆಸೆರೆರಚಾಟ ನಡೆದಿತ್ತು. ಅಷ್ಟೇ ಅಲ್ಲ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಆರೋಪ ಪಟ್ಟಿ ಬಿಡುಗಡೆ ಮಾಡಿದ್ದಾಗಲೂ ಈಶ್ವರಪ್ಪ ಗೈರು ಹಾಜರಾಗಿದ್ದರು.