ಗದ್ದುಗೆಯಲ್ಲಿ ಐಕ್ಯರಾದ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು
ತುಮಕೂರು, ಜನವರಿ 22 : ತ್ರಿವಿಧ ದಾಸೋಹಿ, ಕಾಯಕಯೋಗಿ, ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿಗಳ ಯಗಾಂತ್ಯವಾಗಿದೆ. ಸಿದ್ದಗಂಗಾ ಮಠದ ಆವರಣದಲ್ಲಿನ ಗದ್ದುಗೆಯಲ್ಲಿ ಶತಾಯುಷಿ ಶ್ರೀಗಳು ಲೀನವಾದರು.
ಸೋಮವಾರ ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಅಂತ್ಯಕ್ರಿಯೆ ಮಂಗಳವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. 10 ಲಕ್ಷಕ್ಕೂ ಅಧಿಕ ಜನರು, ವಿವಿಧ ಗಣ್ಯರು ತ್ರಿವಿಧ ದಾಸೋಹಿಗೆ ಅಂತಿಮ ನಮನ ಸಲ್ಲಿಸಿದರು.
ಮಂಗಳವಾರ ಸಂಜೆ ಗೋಸಲ ಸಿದ್ದೇಶ್ವರ ವೇದಿಕೆಯಿಂದ ಕ್ರಿಯಾ ಸಮಾಧಿ ಕಟ್ಟಡದ ತನಕ ಶ್ರೀಗಳ ಅಂತಿಮ ಯಾತ್ರೆಯನ್ನು ರುದ್ರಾಕ್ಷಿ ರಥದಲ್ಲಿ ನಡೆಸಲಾಯಿತು. ಲಕ್ಷಾಂತರ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಶಿವಕುಮಾರ ಶ್ರೀಗಳ ಗುರುಗಳಾದ ಉದ್ಧಾನ ಶಿವಯೋಗಿಗಳ ಗದ್ದುಗೆಯ ಪಕ್ಕದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ, ಕಿರಿಯ ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀಗಳ ಅಂತಿಮ ಸಂಸ್ಕಾರ ನಡೆಸಲಾಯಿತು....ವಿಧಿ ವಿಧಾನದ ವಿವರಗಳು ಚಿತ್ರಗಳಲ್ಲಿ

ಮಹಾ ಮಂಗಳಾರತಿ
ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಶ್ರೀಗಳಿಗೆ ಮಹಾ ಮಂಗಳಾರತಿ ಮಾಡಿ ಅಂತಿಮ ಯಾತ್ರೆಯ ಮೆರವಣಿಗೆ ಆರಂಭಿಸಲಾಯಿತು. 1 ಲಕ್ಷದ 1 ರುದ್ರಾಕ್ಷಿ ಹಾಗೂ ಹೂ ಗಳಿಂದ ಅಲಂಕರಿಸಿದ್ದ ರಥದಲ್ಲಿ ಕ್ರಿಯಾ ಸಮಾಧಿ ಕಟ್ಟಡದ ತನಕ ಅಂತಿಮ ಯಾತ್ರೆಯನ್ನು ಆರಂಭಿಸಲಾಯಿತು. ಲಕ್ಷಾಂತರ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಂಡರು.

ಸಕಲ ಸರ್ಕಾರಿ ಗೌರವ ಸಲ್ಲಿಕೆ
ಶಿವಕುಮಾರ ಸ್ವಾಮೀಜಿಗಳ ಕ್ರಿಯಾ ಸಮಾಧಿ ಸ್ಥಳಕ್ಕೆ ಯಾತ್ರೆ ತಲುಪುತ್ತಿದ್ದಂತೆ ಕರ್ನಾಟಕ ಸರ್ಕಾರದ ಪರವಾಗಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಂತಿಮ ನಮನ ಸಲ್ಲಿಸಿದರು. 3 ಸುತ್ತುಗಳ ಕುಶಾಲ ತೋಪು ಹಾರಿಸಿ, ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತ್ರಿವರ್ಣ ಧ್ವಜವನ್ನು ಕಿರಿಯ ಶ್ರೀಗಳಿಗೆ ಹಸ್ತಾಂತರ ಮಾಡಿದರು.

ಬೆಳಗ್ಗೆಯಿಂದ ಪೂಜಾ ಕಾರ್ಯಗಳು
ಕ್ರಿಯಾ ಸಮಾಧಿ ಸ್ಥಳದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು. ಕಲಶವನ್ನು ಸ್ಥಾಪನೆ ಮಾಡಿ ಐವರು ಸ್ವಾಮೀಜಿಗಳ ನೇತೃತ್ವದಲ್ಲಿ ಪುಣ್ಯ ಸೇರಿದಂತೆ ವಿವಿಧ ಕಾರ್ಯಗಳನ್ನು ನಡೆಸಲಾಯಿತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿವಿಧ ಪೂಜೆಗಳನ್ನು ನಡೆಸಲಾಯಿತು. ಎಲ್ಲಾ ಪೂಜೆಗಳನ್ನು ಕಿರಿಯ ಶ್ರೀಗಳ ನೇತೃತ್ವದಲ್ಲಿ ನಡೆಸಲಾಯಿತು.

ಮೂರು ಹಂತದ ಮೆಟ್ಟಿಲುಗಳು
9 ಪಾದ ಆಳ, 9 ಪಾದ ಉದ್ದ, 5 ಪಾದ ಅಗಲದಲ್ಲಿ ನಿರ್ಮಾಣವಾಗಿರುವ ಕ್ರಿಯಾ ಸಮಾಧಿಯಲ್ಲಿ ಮೂರು ಹಂತದ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿತ್ತು. ಶ್ರೀಗಳ ಪಾರ್ಥಿವ ಶರೀರವನ್ನು ಪ್ರತಿಯೊಂದು ಮೆಟ್ಟಿಲುಗಳ ಮೇಲಿಟ್ಟು ಶುದ್ಧೀಕರಣ ಮಾಡಲಾಯಿತು. ಪಂಚಾಮೃತದ ಅಭಿಷೇಕ, ರುದ್ರಾಭಿಷೇಕ ಮಾಡಿ, ಮಹಾ ಮಂಗಳಾರತಿ ಮಾಡಲಾಯಿತು.

ತ್ರಿಕೋನಾಕೃತಿ ಗೂಡು
ಅಂತಿಮವಾಗಿ ತ್ರಿಕೋನಾಕೃತಿ ಗೂಡಿನಲ್ಲಿ ಶ್ರೀಗಳ ಶರೀರವನ್ನು ಇಟ್ಟು ನಾಡಿನ ಪುಣ್ಯ ನದಿಗಳಿಂದ ತಂದಿದ್ದ ಪವಿತ್ರ ತೀರ್ಥದಿಂದ ಅಭಿಷೇಕ ಮಾಡಲಾಯಿತು. ಹೊಸ ವಸ್ತ್ರವನ್ನು ಧಾರಣೆ ಮಾಡಲಾಯಿತು. ಹಸಿಗಡಲೆ ನೈವೇದ್ಯ ಮಾಡಿ, ಮಂಗಳಾರತಿ ಮಾಡಿ ಸುಮಾರು 10 ಸಾವಿರ ವಿಭೂತಿ ಗಟ್ಟಿ, 20 ಚೀಲ ಉಪ್ಪು, 10 ಚೀಲ ಮರಳು, 1001 ವಿವಿಧ ಬಗೆಯ ಪತ್ರೆಗಳನ್ನು ಬಳಕೆ ಮಾಡಿ ಶರೀರವನ್ನು ಮುಚ್ಚಲಾಯಿತು.












Click it and Unblock the Notifications