ತುಮಕೂರು ವರೆಗೂ ಮೆಟ್ರೋ ವಿಸ್ತರಣೆಗೆ ಚಿಂತನೆ: ಪರಮೇಶ್ವರ್
ತುಮಕೂರು, ಡಿಸೆಂಬರ್ 17: ಮೆಟ್ರೋ ಸಂಪರ್ಕವನ್ನು ಬೆಂಗಳೂರಿನಿಂದ ತುಮಕೂರಿಗೆ ವಿಸ್ತರಿಸುವ ಬಗ್ಗೆ ಅಧಿಕಾರಿಗಳ ಬಳಿ ಚರ್ಚಿಸಿದ್ದೇನೆ ಎಂದು ಗೃಹ ಮಂತ್ರಿ ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ನಗರದ ಹೊರ ವರ್ತುಲ ರಸ್ತೆ ಪುನರ್ನಿರ್ಮಾಣ, ಸ್ಮಾರ್ಟ್ ರಸ್ತೆ ಯೋಜನೆಗಳಿಗೆ ಶಂಕು ಸ್ಥಾಪನೆ, ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ 196 ಕೋಟಿ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿ ಅವರು ಮಾತನಾಡಿದರು.
ಬೆಂಗಳೂರು-ತುಮಕೂರು ನಗರದ ನಡುವೆ ಪ್ರತಿದಿನ ಕನಿಷ್ಠ 50,000 ಜನ ಓಡಾಡುತ್ತಾರೆ ಅವರ ಅನುಕೂಲಕ್ಕಾಗಿ ಹಾಗೂ ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ ಮೆಟ್ರೋ ಸಂಪರ್ಕವನ್ನು ತುಮಕೂರಿನ ವರೆಗೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯ ಚಿಂತನೆ 2006 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಆರಂಭವಾಯಿತು. ಪ್ರಸ್ತುತ ಈ ಯೋಜನೆಗೆ ರಾಜ್ಯ ಸರ್ಕಾರ 50% ಹಣ ನೀಡುತ್ತಿದೆ ಕೇಂದ್ರ ಸರ್ಕಾರ 50% ಹಣ ನೀಡುತ್ತಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ತುಮಕೂರು ಮಹಾನಗರ ಪಾಲಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಪರಮೇಶ್ವರ್, ರಾಜ್ಯದ ಮಹಾನಗರ ಪಾಲಿಕೆಗಳಲ್ಲಿಯೇ ತುಮಕೂರು ಅತ್ಯಂತ ಕೆಳ ಮಟ್ಟದಲ್ಲಿದೆ. ನಗರದ ಪ್ರಮುಖ ರಸ್ತೆಗಳಾದ ಚಿಕ್ಕಪೇಟಿ, ಬಾರ್ಲೈನ್ ರಸ್ತೆಗಳು ಅತ್ಯಂತ ಕಿರಿದಾಗಿವೆ. ನಗರದ ಮುಖ್ಯ ರಸ್ತೆಯೇ ಹಳ್ಳ-ಗುಂಡಿಗಳಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾತನಾಡಿ, ನಗರಗಳು ಆದಾಯ ಸಂಪಾದನೆ ಬಗ್ಗೆಯೂ ಚಿಂತನೆ ಮಾಡಬೇಕು. 2000 ಕೋಟಿ ತೊಡಗಿಸಿದರೆ ಮುಂದಕ್ಕೆ 10000 ಕೋಟಿ ಆದಾಯ ಬರುವಂತೆ ಆಗಬೇಕು ಎಂದು ಅವರು ಹೇಳಿದರು.












Click it and Unblock the Notifications