ಶಿರಾ ಉಪ ಚುನಾವಣೆಯಲ್ಲಿ ಅಚ್ಚರಿಯ ಹೆಸರು...
ತುಮಕೂರು, ಸೆಪ್ಟೆಂಬರ್ 30: ಶಾಸಕ ಬಿ.ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಶಿರಾ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸಲು ಪಕ್ಷಗಳ ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಶಿರಾ ಕ್ಷೇತ್ರದಲ್ಲಿ ಜನರೊಂದಿಗೆ ಇದ್ದು, ಕ್ಷೇತ್ರದ ಜನತೆಗೆ ಬೇಕಾಗಿರುವ ಮೂಲಸೌಕರ್ಯ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವಂತಹ ಸಕ್ರಿಯ ರಾಜಕಾರಣಿಗಾಗಿ ಶಿರಾ ಜನತೆ ಹುಡುಕಾಟದಲ್ಲಿದ್ದಾರೆ.
ಇದೀಗ ಶಿರಾ ಬೈ ಎಲೆಕ್ಷನ್ ನಲ್ಲಿ ಅಚ್ಚರಿ ಹೆಸರು ಕೇಳಿ ಬಂದಿದೆ. ಶಿರಾ ಕ್ಷೇತ್ರದಲ್ಲಿ ಅತಿ ಹೆಚ್ಚು ಪಶುಪಾಲಕರು, ಕುರಿಗಾಯಿಗಳು ಹೈನುಗಾರಿಕೆಯನ್ನು ಮಾಡಿಕೊಂಡು ಬದುಕುತ್ತಿದ್ದಾರೆ. ಶಿರಾ ತಾಲೂಕಿನ ಜನತೆ ಹಾಗೂ ಹೈನುಗಾರರು, ಕುರಿಗಾಯಿಗಳು ಹಾಗೂ ಮತದಾರರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಕೆ ನಾಗಣ್ಣರವರನ್ನು ಶಿರಾ ವಿಧಾನ ಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಮುಂದೆ ಓದಿ...

ಯಾರು ಡಾ.ಕೆ. ನಾಗಣ್ಣ?
ಡಾ.ಕೆ ನಾಗಣ್ಣ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ರಾಗನಹಳ್ಳಿ ಗ್ರಾಮದ ರೈತ ಕುಟುಂಬದವರು. ಇವರು ಪಶು ವೈದ್ಯಕೀಯ ಇಲಾಖೆಯಲ್ಲಿ ಪಶು ವೈದ್ಯರಾಗಿ ವೃತ್ತಿ ಆರಂಭಿಸಿದವರು. ಕ್ರಿಯಾಶೀಲ ಅಧಿಕಾರಿಯಾಗಿದ್ದು, ಜಲಾನಯನ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ.
ಶಿರಾ ಕ್ಷೇತ್ರದ ಜನತೆಗೆ ತುಂಬಾ ಹತ್ತಿರವಾಗಿರುವ ಇವರು, ಈ ಹಿಂದೆ ಮಾಜಿ ಸಚಿವ ಟಿ.ಬಿ ಜಯಚಂದ್ರ ಸಚಿವರಾಗಿದ್ದಾಗ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಆ ದಿನಗಳಲ್ಲಿ ಶಿರಾ ಜನತೆಗೆ ಕುರಿಸಾಕಾಣಿಕೆ ಮಾಡಲು ಸಾಲ ಸೌಲಭ್ಯ, ಕೃಷಿಕರಿಗೆ ನೀರಾವರಿ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರಿನಲ್ಲಿ ಹೆಸರು ಗಳಿಕೆ
ನಾಗಣ್ಣ ಅವರು ಈ ಹಿಂದೆ ಬಿ. ಸುರೇಶ್ಗೌಡ ಅವರು ಶಾಸಕರಾಗಿದ್ದ ಸಂದರ್ಭ 3 ವರ್ಷಗಳ ಕಾಲು ತುಮಕೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ತುಮಕೂರು ಗ್ರಾಮಾಂತರದಲ್ಲಿ ಎಲ್ಲಾ ಅಧಿಕಾರಿಗಳ ಸಹಭಾಗಿತ್ವದಲ್ಲಿ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಿತರಿಸುವಲ್ಲಿ ಹಾಗೂ ಅರಿವು ಮೂಡಿಸುವಲ್ಲಿ ಹೆಚ್ಚಿನದಾಗಿ ನರೇಗಾದ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಇವರ ಕಾರ್ಯವನ್ನು ಕಂಡ ಸುರೇಶ್ಗೌಡರು ಡಾ.ಕೆ ನಾಗಣ್ಣರವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ
ಸರ್ಕಾರಿ ಇಲಾಖೆಯಲ್ಲಿ ಸೇವೆಗೆ ಸೇರಿ 23 ವರ್ಷಗಳು ಕಳೆದಿವೆ. ಅಂದಿನಿಂದ ಇವರು ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಸದ್ಯಕ್ಕೆ ತುಮಕೂರಿನ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಕಚೇರಿಗೆ ಪ್ರತಿದಿನ ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ಕುರಿಗಾಯಿಗಳು, ಹೈನುಗಾರರು, ಯುವಕರು ಬಂದು ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಕೇಳಿ ಸೌಲಭ್ಯ ಪಡೆಯುತ್ತಾರೆ.
ಕುಂಚಿಟಿಗ ಸಮುದಾಯಕ್ಕೆ ಸೇರಿದ ಡಾ.ಕೆ ನಾಗಣ್ಣನವರನ್ನು ಶಿರಾ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರದ ಜನ ಒತ್ತಾಯ ಮಾಡುತ್ತಿದ್ದಾರೆ. ಈ ಕುರಿತು "ಒನ್ ಇಂಡಿಯಾ ಕನ್ನಡ"ದೊಂದಿಗೆ ಮಾತನಾಡಿದ ಡಾ.ನಾಗಣ್ಣ, "ಶಿರಾ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜನರು ಒತ್ತಾಯ ಮಾಡಿದ್ದಾರೆ. ಇದುವರೆಗೂ ನನ್ನನ್ನು ಯಾವ ಪಕ್ಷದವರು ಭೇಟಿ ಮಾಡಿಲ್ಲ, ನಾನು ಸ್ಪರ್ಧಿಸುವಂತೆ ಮತದಾರರು ಒತ್ತಾಯ ಮಾಡುತ್ತಿದ್ದು, ಕಾದು ನೋಡೋಣ" ಎಂದಿದ್ದಾರೆ.

ಪಕ್ಷ ಬೆಂಬಲಿಸಿದರೆ ಜಯ ಸಿಗುವುದೇ?
ಡಾ.ಕೆ ನಾಗಣ್ಣನವರನ್ನು ಯಾವುದಾದರೂ ಒಂದು ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ, ನಾಗಣ್ಣರವರು ಚುನಾವಣೆಯ ಅಖಾಡಕ್ಕೆ ಧುಮುಕಿದರೆ ಗೆಲುವು ಸಿಗಬಹುದು ಎಂಬ ಅಭಿಪ್ರಾಯಗಳು ಶಿರಾದಲ್ಲಿ ಕೇಳಿಬರುತ್ತಿವೆ. ಇತ್ತೀಚೆಗೆ ಶಿರಾ ಭಾಗದ ಭುವನಹಳ್ಳಿಯಲ್ಲಿ 44 ಕೋಟಿ ರೂಗಳಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಕುರಿ ವದಗಾರದ ನಿರ್ಮಾಣಕ್ಕೆ ಹಾಕಿದ ಶ್ರಮ ಫಲ ತಂದು ಕೊಡುವುದೇ ಕಾದು ನೋಡಬೇಕಿದೆ.












Click it and Unblock the Notifications