ರಾಹುಲ್ ಗಾಂಧಿಗೆ ಹಾರ ತೂರಿದ ಪ್ರಕರಣ, ಭದ್ರತಾ ಲೋಪದ ತನಿಖೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತುಮಕೂರು ಪ್ರವಾಸದ ವೇಳೆ ವ್ಯಕ್ತಿಯೊಬ್ಬ ತೂರಿದ ಹಾರ ನೇರವಾಗಿ ಕುತ್ತಿಗೆಗೆ ಬಂದು ಬಿದ್ದಿದ್ದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲೇನೋ ವೈರಲ್ ಆಗಿದೆ. ಆದರೆ ಹಾಗೆ ಹಾರ ತೂರಿದ ವ್ಯಕ್ತಿ ಸಮಸ್ಯೆಗೆ ಸಿಕ್ಕಿಹಾಕಿಕೊಂಡಂತಾಗಿದೆ. ಜತೆಗೆ ಇದನ್ನು ಗಂಭೀರ ಭದ್ರತಾ ಲೋಪ ಎಂದು ಪರಿಗಣಿಸಿ ತನಿಖೆಗೆ ಆದೇಶ ಮಾಡಲಾಗಿದೆ.
ವರದಿಗಳ ಪ್ರಕಾರ, ಕೇಂದ್ರ ವಲಯದ ಐಜಿಪಿ ಬಿ.ದಯಾನಂದ ಅವರು, ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರಿಗೆ ತನಿಖೆಗೆ ಆದೇಶಿಸಿದ್ದಾರೆ. ಅಂದಹಾಗೆ ಆ ಹಾರ ಹಾಕಿದ ಅಪರಿಚಿತ ವ್ಯಕ್ತಿಯ ಹುಡುಕಾಟದಲ್ಲಿ ಪೊಲೀಸರು ತೊಡಗಿಕೊಂಡಿದ್ದಾರೆ.
ರಾಹುಲ್ ಕೊರಳಿಗೆ ಕರೆಕ್ಟಾಗಿ ಬಿದ್ದ ಹೂವಿನ ಹಾರ: ಭೇಷ್ ಅಂದ ರಮ್ಯಾ
ಇನ್ನೂ ಕೆಲವು ವರದಿ ಪ್ರಕಾರ, ರಾಹುಲ್ ಗಾಂಧಿ ಅವರ ಸ್ವಂತ ವಿಶೇಷ ಸುರಕ್ಷತಾ ಪಡೆಯನ್ನೇ ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ. ಈಚೆಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಶಿವಕುಮಾರ ಸ್ವಾಮೀಜಿ ಅವರನ್ನು ಮಾತನಾಡಿಸಿ, ಜನ್ಮ ದಿನದ ಶುಭಾಶಯವನ್ನು ಕೋರಿದ್ದರು.
ಅಂದಹಾಗೆ, ಹಾರವನ್ನು ತೂರಿ ಎಸೆದಿದ್ದು ಸೀದಾ ರಾಹುಲ್ ಗಾಂಧಿ ಅವರ ಕೊರಳಿಗೆ ಸುತ್ತಿಕೊಂಡಿತ್ತು. ಈ ಘಟನೆಯಿಂದ ರಾಹುಲ್ ಕ್ಷಣ ಕಾಲ ವಿಚಲಿತರಾದಂತೆ ಕಂಡುಬಂದರು. ಆ ನಂತರ ಸಾವರಿಸಿಕೊಂಡು ಜನರತ್ತ ಕೈ ಬೀಸಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಪಕ್ಷದ ಇತರರ ಜತೆ ಹಂಚಿಕೊಂಡಿದ್ದರು.