ತುಮಕೂರು : ಮಾಲಿನಿ ರಾವ್ ಕೊಲೆ ರಹಸ್ಯ ಬಯಲು
ತುಮಕೂರು, ಏ. 21 : ತುಮಕೂರಿನ ಎಂ.ಜಿ.ರಸ್ತೆಯ ಕೃಷ್ಣ ಚಿತ್ರಮಂದಿರದ ಮಾಲೀಕ ಶ್ರೀನಿವಾಸ ರಾವ್ ಪತ್ನಿ ಮಾಲಿನಿ ರಾವ್ ಕೊಲೆ ರಹಸ್ಯ ಕೊನೆಗೂ ಬಯಲಾಗಿದೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಾಲಿನಿ ರಾವ್ ಅವರನ್ನು ಗಂಡ ಮತ್ತು ಮಗ, ಸೊಸೆ ಸೇರಿ ಕೊಲೆ ಮಾಡಿದ್ದರು.
ಮೈಸೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ಶ್ರೀನಿವಾಸ ರಾವ್, ಅವರ ಪುತ್ರ ಸಂತೋಷ್ ಮತ್ತು ಸೊಸೆ ಲಕ್ಷ್ಮೀಯನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

2011ರ ಫೆ.7ರಂದು ಮಾಲಿನಿ ರಾವ್ ಅವರ ಶವ ಮನೆಯ ಬೆಡ್ರೂಂನಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕವಾಗಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿತ್ತು. [ತುಮಕೂರು ಡಿಸಿ ಹತ್ಯೆ ಯತ್ನ, ತನಿಖೆಗೆ ಸೂಚನೆ]
ಕೊಲೆ ಪ್ರಕರಣ ದಾಖಲು : ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಸಿರುಗಟ್ಟಿ ಮಾಲಿನಿ ರಾವ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತ್ತು. ಕುತ್ತಿಗೆ ಮತ್ತು ಎಡ ಕಿಡ್ನಿಯಲ್ಲಿ ಗಾಯಗಳಾಗಿದ್ದ ಅಂಶ ವರದಿಯಿಂದ ಬೆಳಕಿಗೆ ಬಂದಿತ್ತು. ಮಾಲಿನಿ ಅವರ ಶವ ಪತ್ತೆಯಾದ ಒಂದು ವರ್ಷದ ನಂತರ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಮಾಲಿನಿ ರಾವ್ ಅವರದ್ದು ಆತ್ಮಹತ್ಯೆ ಎಂದು ಹೇಳಿಕೆ ನೀಡುವಂತೆ ಸಾಕ್ಷಿಗಳಿಗೆ ಒತ್ತಡ ಹೇರುತ್ತಿದ್ದದ್ದು ಬೆಳಕಿಗೆ ಬಂದಿತ್ತು. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಶ್ರೀನಿವಾಸ ರಾವ್ ಮಗ ಮತ್ತು ಸೊಸೆಯ ಜೊತೆ ಸೇರಿ ಮಾಲಿನಿ ಅವರನ್ನು ಕೊಂದು ಶವಕ್ಕೆ ಬೆಂಕಿ ಹಚ್ಚಿ ಪೊಲೀಸರ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದರು.
ಈ ಹಿಂದೆ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರ ವಿರುದ್ಧ ಇಲಾಖಾ ತನಿಖೆ ನಡೆಸಲಾಗುತ್ತದೆ. ಅವರು ತಪ್ಪಿತಸ್ಥರು ಎಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾರ್ತಿಕ್ ರೆಡ್ಡಿ ಹೇಳಿದ್ದಾರೆ. ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.












Click it and Unblock the Notifications