ವೀರಶೈವ- ಲಿಂಗಾಯತ ಒಂದೇ: ಸಿದ್ದಗಂಗಾ ಮಠದ ನಿಲುವು ಪ್ರಕಟ
ತುಮಕೂರು, ಸೆಪ್ಟೆಂಬರ್ 12: "ಲಿಂಗಾಯತ ಹಾಗೂ ವೀರಶೈವ ಬೇರೆ ಅಲ್ಲ" ಎಂದು ತುಮಕೂರಿನ ಸಿದ್ದಗಂಗಾ ಮಠದಿಂದ ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಈಚೆಗೆ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದ್ದರು.
ಎಂ.ಬಿ. ಪಾಟೀಲ್ ಹೇಳಿಕೆಯ ಸತ್ಯಾಸತ್ಯತೆ ಅನುಮಾನಿಸಿದ ಓದುಗರು
ಆದರೆ, ಒಂದೆರಡು ದಿನದಲ್ಲೇ ಮಠದಿಂದ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಗ್ರಾಮೀಣ ಭಾಗದಲ್ಲಿ ಲಿಂಗಾಯತ ಎನ್ನುತ್ತಾರೆ. ನಗರ ಭಾಗಗಳಲ್ಲಿ ವೀರಶೈವ ಎನ್ನುತ್ತಾರೆ. ಆದರೆ ಎರಡೂ ಬೇರೆ ಬೇರೆ ಅಲ್ಲ ಎಂದು ತಿಳಿಸಿದ್ದಾರೆ. ಈಚಿನ ಪಾಟೀಲರ ಹೇಳಿಕೆಗೆ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಈ ಹೇಳಿಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ರಾಜಕೀಯ ಲಾಭಕ್ಕಾಗಿ ಮಠದ ಹೆಸರನ್ನು ಬಳಸಬೇಡಿ. ಲಿಂಗಾಯತ- ವೀರಶೈವ ಬೇರೆ ಎಂಬ ವಾದ ಮಾಡಿ, ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ ಇದೇ ವಿಚಾರವಾಗಿ ಮಾಧ್ಯಮಗಳ ಜತೆ ಮಾತನಾಡಿದ ಎಂ.ಬಿ.ಪಾಟೀಲ, ನಾನು ಆಣೆ ಮಾಡುತ್ತೇನೆ. ಶ್ರೀಗಳು ಲಿಂಗಾಯತ ಧರ್ಮಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದರು ಎಂದಿದ್ದಾರೆ.
ಒಟ್ಟಾರೆ ಸಿದ್ದಗಂಗಾ ಮಠದ ಪ್ರಕಟಣೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.