ಗುಬ್ಬಿಯಲ್ಲಿ ಪಂಚರತ್ನ ಯಾತ್ರೆ; ಶಕ್ತಿ ಪ್ರದರ್ಶಿಸಿದ ಎಚ್ಡಿಕೆ
ತುಮಕೂರು, ಡಿಸೆಂಬರ್ 06; ಭವ್ಯ ಸ್ವಾಗತ, ಸಾವಿರಾರು ಜನರ ಸಾಲು, ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆ ಈ ದೃಶ್ಯಗಳು ಕಂಡು ಬಂದಿದ್ದು ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಯಲ್ಲಿ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ 18ನೇ ದಿನಕ್ಕೆ ಕಾಲಿಟ್ಟಿದೆ. ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ರಥಯಾತ್ರೆ ನಡೆಯಿತು.
ಹಲವು ಕಾರಣಗಳಿಗೆ ಗುಬ್ಬಿಯಲ್ಲಿ ನಡೆದ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಕುತೂಹಲಕ್ಕೆ ಕಾರಣವಾಗಿತ್ತು. ಅದಕ್ಕೆ ಕಾರಣ ಸ್ಥಳೀಯ ಶಾಸಕ ಎಸ್. ಆರ್. ಶ್ರೀನಿವಾಸ್. ಜೆಡಿಎಸ್ ಪಕ್ಷದಿಂದ ಅವರು ದೂರವಾಗಿದ್ದಾರೆ. ಆದರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಮಂಗಳವಾರ ಶಕ್ತಿ ಪ್ರದರ್ಶನ ಮಾಡಿದೆ.
ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿ, "ಅಭಿಮಾನದ ಮಹಾಮಳೆ, ಪ್ರವಾಹದಂತೆ ಹರಿದು ಬಂದಿದ್ದ ಮಹಾಜನತೆಯ ಮೇಲೆ ನೀಲಾಕಾಶದಿಂದ ಪುಷ್ಪ ಸಿಂಚನ. ಇದು ಅವಿಸ್ಮರಣೀಯ ನೆನಪು ಹಾಗೂ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸದ ಪರಾಕಾಷ್ಠೆ. ಗುಬ್ಬಿ ಕ್ಷೇತ್ರದ ಜನತೆಗೆ ಅನಂತ ಧನ್ಯವಾದಗಳು. ಕ್ಷೇತ್ರದ ಅಭ್ಯರ್ಥಿ ಶ್ರೀ ನಾಗರಾಜ್ ರಿಗೆ ಶುಭ ಹಾರೈಕೆಗಳು" ಎಂದು ಹೇಳಿದ್ದಾರೆ.
ಗುಬ್ಬಿಯಲ್ಲಿ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಎಚ್. ಡಿ. ಕುಮಾರಸ್ವಾಮಿ, ಕ್ಷೇತ್ರದ ಮುಂದಿನ ಚುನಾವಣೆ ಅಭ್ಯರ್ಥಿ ನಾಗರಾಜ್, ಮಾಜಿ ಶಾಸಕ ಎಂ. ಟಿ. ಕೃಷ್ಣಪ್ಪ ಸೇರಿದಂತೆ ಸ್ಥಳೀಯ, ಜಿಲ್ಲಾ ಮುಖಂಡರು ಪಾಲ್ಗೊಂಡಿದ್ದರು.

ಎಸ್. ಆರ್. ಶ್ರೀನಿವಾಸ್ ನಡೆ ಏನು?
ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಜೆಡಿಎಸ್ ಪಕ್ಷದಿಂದ ದೂರವಾಗಿದ್ದಾರೆ. ಆದರೆ ಅವರ ಚಿತ್ತ ಯಾವ ಕಡೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್ ಸೇರಲಿದ್ದಾರೆಯೇ? ಅಥವ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆಯೇ? ಎಂಬ ಕುತೂಹಲಕ್ಕೆ ತೆರೆ ಬಿದ್ದಿಲ್ಲ.
ಕೆಲವು ದಿನಗಳ ಹಿಂದೆ ಮಾತನಾಡಿದ್ದ ಎಸ್. ಆರ್. ಶ್ರೀನಿವಾಸ್, "ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಮುಗಿದ ಅಧ್ಯಾಯ. ಜೆಡಿಎಸ್ಗೆ ಮರಳಲು ನಾನು ಜಿ. ಟಿ. ದೇವೇಗೌಡ ಅಲ್ಲ, ವಾಸಣ್ಣ" ಎಂದು ಹೇಳಿದ್ದರು.

ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದರು
ಎಸ್. ಆರ್. ಶ್ರೀನಿವಾಸ್ 2018ರ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 55,572 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರೂ ಆಗಿದ್ದರು. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಕಾರಣಕ್ಕೆ ಅವರನ್ನು ಪಕ್ಷ ಉಚ್ಛಾಟನೆ ಮಾಡಿದೆ. ಅಲ್ಲದೇ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಸ್ಪೀಕರ್ಗೆ ದೂರು ಸಹ ನೀಡಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಗುಬ್ಬಿಗೆ ಆಗಮಿಸಿದಾಗ ಎಸ್. ಆರ್. ಶ್ರೀನಿವಾಸ್ ಯಾತ್ರೆ ಸ್ವಾಗತಿಸಿದ್ದರು ಮತ್ತು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.

ಕುಮಾರಸ್ವಾಮಿಗೆ ಎದುರಿಸುವ ಧೈರ್ಯವಿಲ್ಲ
ಕೆಲವು ದಿನಗಳ ಹಿಂದೆ ಮಾತನಾಡಿದ್ದ ಎಸ್. ಆರ್. ಶ್ರೀನಿವಾಸ್, "ನಾನು ಜೆಡಿಎಸ್ ಪಕ್ಷಕ್ಕೆ ಮರಳುವ ಪ್ರಶ್ನೆಯೇ ಇಲ್ಲ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ನನ್ನನ್ನು ಎದುರಿಸು ಧೈರ್ಯ ಇಲ್ಲ" ಎಂದು ವಾಗ್ದಾಳಿ ನಡೆಸಿದ್ದರು.
ಎಸ್. ಆರ್. ಶ್ರೀನಿವಾಸ್ ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದಾರೆ. ಗುಬ್ಬಿಯಲ್ಲಿ ಜೆಡಿಎಸ್ ಪಕ್ಷ ಕೆಲವು ತಿಂಗಳ ಹಿಂದೆ ಬೃಹತ್ ಸಮಾವೇಶ ಆಯೋಜನೆ ಮಾಡಿತ್ತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪಾಲ್ಗೊಂಡಿದ್ದರು. ಆದರೆ ಕ್ಷೇತ್ರದ ಪಕ್ಷದ ಶಾಸಕರೇ ಸಮಾವೇಶಕ್ಕೆ ಗೈರಾಗಿದ್ದರು.
ಗುಬ್ಬಿಯಲ್ಲಿ ನಡೆದ ಪಂಚರತ್ನ ರಥಯಾತ್ರೆ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 6, 2022
18ನೇ ದಿನ ನಡೆಯುತ್ತಿರುವ ಈ ಯಾತ್ರೆಯು ಮಹಾಜನತೆಯ ಬೆಂಬಲದೊಂದಿಗೆ ಅಭೂತಪೂರ್ವವಾಗಿ ಮುನ್ನಡೆಯುತ್ತಿದೆ.
ಕ್ಷೇತ್ರದ ಅಭ್ಯರ್ಥಿ ಶ್ರೀ ನಾಗರಾಜ್, ಮಾಜಿ ಶಾಸಕ ಶ್ರೀ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಸ್ಥಳೀಯ, ಜಿಲ್ಲಾ ಮುಖಂಡರು ಹಾಜರಿದ್ದರು.#ಪಂಚರತ್ನ_ರಥಯಾತ್ರೆ#ಗುಬ್ಬಿ #ತುಮಕೂರು pic.twitter.com/W1tM0q3Q7z
ಗುಬ್ಬಿಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ಜೆಡಿಎಸ್ ಪಕ್ಷ ಗುಬ್ಬಿಯಲ್ಲಿ ಮಂಗಳವಾರ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕ್ಷೇತ್ರದಲ್ಲಿ ಇನ್ನೂ ಪ್ರಭಾವವಿದೆ ಎಂದು ತೋರಿಸಿದೆ. ಕುಮಾರಸ್ವಾಮಿ ಗುಬ್ಬಿಯಲ್ಲಿ ನಡೆದ ಯಾತ್ರೆ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.












Click it and Unblock the Notifications