ಪರಮೇಶ್ವರ್ ಮೇಲೆ ಐಟಿ ದಾಳಿ ಅಂತ್ಯ: ಭಾರಿ ಅಕ್ರಮ ಆಸ್ತಿ ಪತ್ತೆ?
ತುಮಕೂರು, ಅಕ್ಟೋಬರ್ 11: ಮಾಜಿ ಡಿಸಿಎಂ, ಕಾಂಗ್ರೆಸ್ ಶಾಸಕ ಪರಮೇಶ್ವರ್ ಅವರ ನಿವಾಸ ಹಾಗೂ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ಮಾಡಿದ್ದ ಐಟಿ ದಾಳಿ ಇಂದು ಅಂತ್ಯವಾಗಿದೆ.
ನಿನ್ನೆ ಬೆಳಿಗ್ಗೆ ಐಟಿ ಅಧಿಕಾರಿಗಳು ತುಮಕೂರಿನಲ್ಲಿರುವ ಸಿದ್ಧಾರ್ಥ ಶಿಕ್ಷಣ ಸಮೂಹಕ್ಕೆ ಸೇರಿದ ಕಾಲೇಜುಗಳು, ಪರಮೇಶ್ವರ್ ಅವರ ನಿವಾಸ, ಪರಮೇಶ್ವರ್ ಅವರ ಅಣ್ಣನ ಮಗನ ಕಚೇರಿ, ನಿವಾಸದ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದರು.
ಐಟಿ ದಾಳಿಯು ಇಂದು ರಾತ್ರಿ ವೇಳೆಗೆ ಅಂತ್ಯವಾಗಿದ್ದು, ಹಲವು ಮಹತ್ವದ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದಾಳಿಯ ವೇಳೆ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಬೆಳಕಿಗೆ ಬಂದಿವೆ ಎನ್ನಲಾಗುತ್ತಿದೆ. ಸೀಟ್ ಡಬಲ್ ಮಾಡಿ ಕೋಟ್ಯಂತರ ಹಣ ಲಾಭ ಮಾಡಿಕೊಳ್ಳಲಾಗಿದೆ. ನಿಯಮ ಬಾಹಿರವಾಗಿ ಶುಲ್ಕ ಪಡೆದಿರುವುದು ಗೊತ್ತಾಗಿದೆ ಎಂಬ ಮಾಹಿತಿ ಇದೆ.
ಶಿಕ್ಷಣದಿಂದ ಸಂಪಾದಿಸಿದ ಹಣವನ್ನು ಹೊಟೆಲ್ ಉದ್ದಿಮೆಯಲ್ಲಿ ತೊಡಗಿಸಿದ್ದಾರೆ ಎಂಬ ಆರೋಪವೂ ಪರಮೇಶ್ವರ್ ಮೇಲೆ ಇದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ.
ಶಿಕ್ಷಣ ಸಂಸ್ಥೆ ಹಾಗೂ ಮನೆಯ ಮೇಲೆ ನಡೆದ ದಾಳಿಯಲ್ಲಿ ಒಟ್ಟು 4.22 ಕೋಟಿ ನಗದು ಹಣ ಪತ್ತೆಯಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಪರಮೇಶ್ವರ್ ಅವರ ನಿವಾಸದಲ್ಲಿಯೇ 70 ಲಕ್ಷ ಹಣ ಪತ್ತೆಯಾಗಿದೆ ಎನ್ನಲಾಗಿದ್ದು, ಅವರ ಆಪ್ತರ ಖಾತೆಗೂ ಹಣ ವರ್ಗಾವಣೆ ಆಗಿರುವ ಬಗ್ಗೆ ದಾಖಲೆ ಸಂಗ್ರಹಿಸಲಾಗಿದೆ.
ಅಘೋಷಿತ ಆಸ್ತಿ, ಕೆಲಸಗಾರರ, ಶಿಕ್ಷಣ ಸಂಸ್ಥೆ ಸಿಬ್ಬಂದಿ ಹೆಸರಲ್ಲಿ ಕೋಟ್ಯಂತರ ಹಣ ವರ್ಗಾವಣೆ, ಹೂಡಿಕೆ ಮಾಡಿರುವ ದಾಖಲೆಗಳು, ವೈದ್ಯಕೀಯ ಸೀಟು ಬದಲಿ ಮಾಡಿರುವುದು, ನಗದು ಶುಲ್ಕ ವಸೂಲಿ ಇನ್ನೂ ಹಲವು ನಿಯಮ ಬಾಹಿರ ಚಟುವಟಿಕೆಗಳು ನಡೆದಿರುವುದು ಐಟಿ ಗಮನಕ್ಕೆ ಬಂದಿದೆ. ಈ ಬಗ್ಗೆ ದಾಖಲೆಗಳನ್ನು ಕಲೆ ಹಾಕಲಾಗಿದೆ.












Click it and Unblock the Notifications