ನಮಗೂ ಆತ್ಮಗೌರವ ಇದೆ, ಕಾರ್ಯಕ್ರಮಕ್ಕೆ ಹೋಗಲ್ಲ; ಎಚ್ಡಿಕೆ ವಿರುದ್ಧ ವಾಸಣ್ಣ ಆಕ್ರೋಶ
ತುಮಕೂರು, ಅಕ್ಟೋಬರ್ 23: ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ನಡೆಯುವ ಜೆಡಿಎಸ್ ಕಾರ್ಯಕ್ರಮದ ಬಗ್ಗೆ ನನಗೆ ಗೊತ್ತಿಲ್ಲ, ನಾನು ಹೋಗುವುದಿಲ್ಲ. ನಮ್ಮ ಕಾರ್ಯಕರ್ತರೂ ಹೋಗಲ್ಲ ಎಂದು ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದ್ದಾರೆ.
ಪಕ್ಷದ ಯಾವ ವರಿಷ್ಠರು ಬರುತ್ತಾರೆ ಅನ್ನುವುದು ಮುಖ್ಯವಲ್ಲ, ನಮಗೂ ಆತ್ಮಗೌರವ, ಸ್ವಾಭಿಮಾನ ಅನ್ನೋದು ಇದೆ. ಸ್ವಾಭಿಮಾನ ಮಾರಿಕೊಂಡು ಪಕ್ಷದಲ್ಲಿರಬೇಕು ಅಂತಿಲ್ಲ. ಯಾರು ಬಂದರೂ ಅಷ್ಟೇ, ಅವರ ನಡವಳಿಕೆ ಸರಿ ಇರಬೇಕು. ಅವರೊಬ್ಬರಿಗೆ ಗೌರವ ಅಲ್ಲ, ಎಲ್ಲರಿಗೂ ಗೌರವ ಇರುತ್ತದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಎಸ್.ಆರ್. ಶ್ರೀನಿವಾಸ್ ಅಸಮಾಧಾನ ಹೊರಹಾಕಿದರು.
ಜೆಡಿಎಸ್ ಪಕ್ಷಕ್ಕೆ 20 ವರ್ಷದಿಂದ ದುಡಿದಿರುವವರಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆಯಾದ ಸಂದರ್ಭದಲ್ಲಿ ಯಾವುದೇ ಮನುಷ್ಯ ಸ್ವಾಭಿಮಾನ ಕಳೆದುಕೊಂಡು ಪಕ್ಕದಲ್ಲಿ ಇರಬೇಕು ಅಂತೇನಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಯಾವ ಲೀಡರ್ ಬಂದರೂ ಅವರ ನಡವಳಿಕೆ ಸರಿಬೇಕು ಅವರ ಜೊತೆಗೆ ಎಲ್ಲರಿಗೂ ಗೌರವ ಇರುತ್ತದೆ ಅಂತಾ ಕುಮಾರಸ್ವಾಮಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಜೊತೆ ಚರ್ಚೆ ಮುಗಿದಿದೆ. ವೈಯಕ್ತಿಕವಾಗಿ ಮಾತನಾಡುವುದು ಮುಗಿದು ಅಧ್ಯಾಯವಾಗಿದೆ. ಅ.25ರ ನಂತರ ನನ್ನ ನಿರ್ಧಾರ ಏನೆಂದು ತಿಳಿಸುತ್ತೇನೆ. ಕಾರ್ಯಕರ್ತರು, ಬೆಂಬಲಿಗರ ಸಭೆ ಬಳಿಕ ನಿರ್ಧಾರ ತಿಳಿಸುತ್ತೇನೆ ಎಂದರು.
ನಾನು ಜೆಡಿಎಸ್ನಲ್ಲೇ ಇರಬೇಕೆಂದು ಅಂದುಕೊಂಡಿದ್ದೆ. ಆದರೆ ಅವರು ಆ ಹಂತ ಮೀರಿ ಮುಂದೆ ಹೋಗಿದ್ದಾರೆ. ಇದೆಲ್ಲಾ ನಾವಾಗಿ ಮಾಡಿಕೊಂಡಿರುವುದಲ್ಲ. ನಾನು ಮುಕ್ತವಾಗಿದ್ದೆ, ಯಾವಾಗ ಕರೆದರೂ ನಾನು ಹೋಗುತ್ತಿದ್ದೆ ಎಂದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

25ರ ಜೆಡಿಎಸ್ ಕಾರ್ಯಕ್ರಮವೇನು?
ಕ್ಷೇತ್ರದ ಶಾಸಕರಿಗೇ ತಿಳಿಯದೇ ಕ್ಷೇತ್ರದಲ್ಲಿ ಜೆಡಿಎಸ್ನ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಗುಬ್ಬಿ ಕ್ಷೇತ್ರದ ಯುವ ಮುಖಂಡರಾದ ಬಿ.ಎಸ್. ನಾಗರಾಜು ಅಕ್ಟೋಬರ್ 25ರಂದು ಗುಬ್ಬಿ ಪಟ್ಟಣದ ಸರ್ಕಾರಿ ಮೈದಾನದಲ್ಲಿ ಜೆಡಿಎಸ್ ಪಕ್ಷದ ಸಮಾವೇಶ ಆಯೋಜನೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಸಮಾವೇಶ ಉದ್ಘಾಟಿಸಲಿದ್ದಾರೆ.
ಆದರೆ, ಈ ಕಾರ್ಯಕ್ರಮದ ಬಗ್ಗೆ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ಗೆ ತಿಳಿದಿಲ್ಲ. ಹೀಗಾಗಿ ನಡೆಯುತ್ತಿರುವ ಕಾರ್ಯಕ್ರಮ ಬಗ್ಗೆ ನನಗೆ ಗೊತ್ತಿಲ್ಲ. ನಾನು ಹೋಗಲ್ಲ ಅಂತ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಶಾಸಕ ಎಸ್.ಆರ್. ಶ್ರೀನಿವಾಸ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಆತ್ಮೀಯತೆ ಮೊದಲಿನಂತೆ ಇಲ್ಲ. ಹೀಗಾಗಿ ಆಗಾಗ ಶ್ರೀನಿವಾಸ್ ಬಹಿರಂಗವಾಗಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದಲ್ಲಿ ಇವರನ್ನು ಸರಿಯಾಗಿ ನಡೆಸಿಕೊಳ್ಳದೇ ಮೂಲೆ ಗುಂಪು ಮಾಡಿದ್ದಾರೆ ಎನ್ನುವ ಮಾತುಗಳು ಕೂಡ ಜೋರಾಗಿ ಕೇಳಿಬಂದಿದ್ದವು. ಜೊತೆಗೆ ಸಾಕಷ್ಟು ಅಸಮಾಧಾನಗಳು ಇರುವ ಕಾರಣ ಶ್ರೀನಿವಾಸ್ ಪಕ್ಷ ಬಿಡುವ ಬಗ್ಗೆಯೂ ಮಾತನಾಡಿದ್ದರು. ಹೀಗಾಗಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಹೊಸ ಮುಖ ಪರಿಚಯ ಮಾಡಿಕೊಡಲು ನಿರ್ಧಾರ ಮಾಡಿ ಸದ್ಯ ಸಮಾರಂಭ ಆಯೋಜಿಸಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಯುವ ಮುಖಂಡ ಬಿ.ಎಸ್. ನಾಗರಾಜು ಅಧಿಕೃವಾಗಿ ಜೆಡಿಎಸ್ ಪಕ್ಷ ಸೇರ್ಪಡೆಯಾಗುತ್ತಿರುವ ಕಾರ್ಯಕ್ರಮಕ್ಕೆ ತಾವುಗಳು ಆಗಮಿಸಿ ಗುಬ್ಬಿ ಕ್ಷೇತ್ರದ ಜನತೆಯ ಸೇವೆ ಮಾಡುವ ಕನಸಿನೊಂದಿಗೆ ಹೊಸ ರಾಜಕೀಯ ಹಾದಿಗೆ ಕಾಲಿಡುತ್ತಿರುವ ನನಗೆ ಬೆಂಬಲಿಸಿ ಆಶೀರ್ವದಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಬಿ.ಎಸ್. ನಾಗರಾಜು ಹೆಸರಿನಲ್ಲಿ ಆಹ್ವಾನ ಪತ್ರಿಕೆ ಪ್ರಕಟಿಸಲಾಗಿದೆ.
ಯಾವ ಸಮಾವೇಶ ಎಂದಿದ್ದ ಶಾಸಕರು?
ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ಗೆ ಪಕ್ಷದ ಸಮಾವೇಶದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಮಾತನಾಡಿರುವ ಅವರು, "ಯಾವ ಸಮಾವೇಶ, ಏನು ನಡೆಯುತ್ತಿದೆ ಎಂದು ಗೊತ್ತಿಲ್ಲ. ಕಾರ್ಯಕ್ರಮ ಆಯೋಜನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರು ಆ ಸಮಾವೇಶ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಜೆಡಿಎಸ್ ಸಮಾವೇಶದ ಬಗ್ಗೆ ನನಗೆ ಮಾಹಿತಿಯೇ ಇಲ್ಲ" ಎಂದು ಹೇಳಿದ್ದಾರೆ.












Click it and Unblock the Notifications