ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ: ತುಂಬಾ ಸಂತೋಷ ಎಂದ ಗುಬ್ಬಿ ಶ್ರೀನಿವಾಸ್
ತುಮಕೂರು, ಜೂನ್ 23: ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ಮಾಡಿದ್ದಕ್ಕಾಗಿ ಗುಬ್ಬಿಯ ಶಾಸಕ ಎಸ್. ಆರ್. ಶ್ರೀನಿವಾಸ್ ಮತ್ತು ಕೋಲಾರದ ಶಾಸಕ ಶ್ರೀನಿವಾಸ ಗೌಡ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಜೆಡಿಎಸ್ ಉಚ್ಛಾಟನೆ ಮಾಡಿದೆ.
ಜೆ. ಪಿ. ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆಯ ನಂತರ ಬಂಡೆಪ್ಪ ಕಾಶೆಂಪೂರ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಉಚ್ಛಾಟನೆಯ ಬಗ್ಗೆ ಗುಬ್ಬಿ ಶಾಸಕರು ಪ್ರತಿಕ್ರಿಯಿಸಿದ್ದು, ಉಚ್ಛಾಟನೆ ಮಾಡಲಿ, ಸಂತೋಷ ಎಂದು ಹೇಳಿದ್ದಾರೆ.
"ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಇಬ್ಬರೂ ಶಾಸಕರನ್ನು ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷರಿಗೆ ಶೀಘ್ರ ದೂರು ನೀಡಲಾಗುವುದು. ಗುರುವಾರ ಅಥವಾ ಶುಕ್ರವಾರ ಸ್ಪೀಕರ್ ಅವರಿಗೆ ದೂರು ನೀಡಲು ತೀರ್ಮಾನಿಸಲಾಗಿದೆ"ಎಂದು ಜೆಡಿಎಸ್ ಶಾಸಕ ಮತ್ತು ಕೋರ್ ಕಮಿಟಿಯ ಸದಸ್ಯರೂ ಆಗಿರುವ ಬಂಡೆಪ್ಪ ಕಾಶೆಂಪೂರ್ ಹೇಳಿದರು.
"ನಮ್ಮ ಅಧಿಕಾರ ಬಳಸಿ ಅವರನ್ನು ಅನರ್ಹಗೊಳಿಸಲು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ನಾವು ಮಾಡುತ್ತೇವೆ. ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ ಇಬ್ಬರ ವಿರುದ್ದ ಪಕ್ಷ ಕ್ರಮ ತೆಗೆದುಕೊಂಡಿದೆ"ಎಂದು ಕಾಶೆಂಪೂರ್ ಪಕ್ಷದ ನಿರ್ಧಾರವನ್ನು ಪ್ರಕಟಿಸಿದರು.

ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ
ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ ಪರವಾಗಿ ಮತ ಚಲಾಯಿಸಬೇಕೆಂದು ವಿಪ್ ನೀಡಲಾಗಿತ್ತು. ಆದರೆ, ಪಕ್ಷದ 32 ಸದಸ್ಯರ ಪೈಕಿ 30 ಶಾಸಕರು ಮಾತ್ರ ಜೆಡಿಎಸ್ ಪರವಾಗಿ ಮತ ಚಲಾಯಿಸಿದ್ದರು. ಕೋಲಾರದ ಶಾಸಕ ಶ್ರೀನಿವಾಸ ಗೌಡ ಅವರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿರುವುದಾಗಿ ಬಹಿರಂಗವಾಗಿಯೇ ಹೇಳಿದ್ದರು. ಇನ್ನು, ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾಗಿ ಜೆಡಿಎಸ್ ಆರೋಪ, ಆದರೆ, ಇದನ್ನು ಇವರು ಅಲ್ಲಗಳೆದಿದ್ದರು. ಈಗ, ಇಬ್ಬರನ್ನೂ ಜೆಡಿಎಸ್ ಉಚ್ಛಾಟನೆಗೊಳಿಸಿದೆ.

ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, "ಉಚ್ಛಾಟನೆ ಮಾಡುವುದು ಗೊತ್ತಿರುವ ವಿಚಾರ, ಇದರಲ್ಲಿ ಹೊಸತನವೇನೂ ಇಲ್ಲ. ಯಾವ ಪಕ್ಷದಲ್ಲಿ ಇದ್ದರೂ ಇದನ್ನೇ ಮಾಡುತ್ತಿದ್ದರು. ಸಂತೋಷವಾಗಿದೆ, ಇದರಿಂದ ನನಗೇನೂ ಬೇಸರವಿಲ್ಲ. ಈ ವಿದ್ಯಮಾನವನ್ನು ನಾನು ಸನ್ಮಾನ, ಅವಮಾನ, ಮುಜುಗರ ಅಂದು ಕೊಳ್ಳುವುದಿಲ್ಲ. ಒಂದು ವರ್ಷದ ಹಿಂದೆಯೇ ಇಲ್ಲಿ ಅಭ್ಯರ್ಥಿಯನ್ನು ಘೋಷಿಸಿದ್ದ ನಂತರ ಉಚ್ಛಾಟನೆಯ ನಿರೀಕ್ಷೆ ನನಗಿತ್ತು"ಎಂದು ಶ್ರೀನಿವಾಸ್ ಹೇಳಿದರು.

ಜೆಡಿಎಸ್ ವರಿಷ್ಠರಿಗೆ ನಾನು ಬೇಕಾಗಿರಲಿಲ್ಲ, ಹಾಗಾಗಿ ಈ ಉಚ್ಛಾಟನೆ
"ಜೆಡಿಎಸ್ ವರಿಷ್ಠರಿಗೆ ನಾನು ಬೇಕಾಗಿರಲಿಲ್ಲ, ಹಾಗಾಗಿ ಈ ಉಚ್ಛಾಟನೆಯಲ್ಲಿ ನನಗೇನೂ ಹೊಸತನ ಕಾಣುತ್ತಿಲ್ಲ. ನಾನು ಜೆಡಿಎಸ್ ಪಕ್ಷದಿಂದ ಗೆದ್ದಿದ್ದೇನೆ, ಅದಕ್ಕೆ ರಾಜೀನಾಮೆಯನ್ನು ಕೊಡಬೇಕು. ಡಿಸೆಂಬರ್ ನಂತರ ನಾನು ರಾಜೀನಾಮೆ ನೀಡುತ್ತೇನೆ, ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವೆ"ಎಂದು ಎಸ್.ಆರ್.ಶ್ರೀನಿವಾಸ್ ಸ್ಪಷ್ಟ ಪಡಿಸಿದರು.

ಕುಮಾರಸ್ವಾಮಿ ಇವರಿಬ್ಬರ ವಿರುದ್ದ ವಾಕ್ ಪ್ರಹಾರ
ರಾಜ್ಯಸಭಾ ಚುನಾವಣೆಯಲ್ಲಿ ಕುಪೇಂದ್ರ ರೆಡ್ಡಿ ಪರಾಭವಗೊಂಡ ನಂತರ ಎಚ್. ಡಿ. ಕುಮಾರಸ್ವಾಮಿ ಇವರಿಬ್ಬರ ವಿರುದ್ದ ವಾಕ್ ಪ್ರಹಾರ ನಡೆಸಿದ್ದರು. "ಅವರಿಗೆ ಮಾನ ಮರ್ಯಾದೆ ಅನ್ನೋದು ಏನಾದರೂ ಇದೆಯಾ, ಪಕ್ಷಕ್ಕೆ ರಾಜೀನಾಮೆ ನೀಡಲಿ, ಇಂತಹ ಪಕ್ಷದ್ರೋಹಿಗಳು ನಮಗೂ ಬೇಕಾಗಿಲ್ಲ"ಎಂದು ಕುಮಾರಸ್ವಾಮಿ ಕಿಡಿಕಾರಿದ್ದರು.












Click it and Unblock the Notifications