ಮೇಡ್ ಇನ್ ಇಂಡಿಯಾ ಎಚ್ಎಂಟಿ ವಾಚಿನ ಟಿಕ್ ಟಿಕ್ ಸದ್ದು ಬಂದ್
ತುಮಕೂರು, ಜುಲೈ 15: ಎಪ್ಪತ್ತು - ಎಂಬತ್ತರ ದಶಕದಲ್ಲಿ 'ದೇಶದ ಸಮಯ ಪಾಲಕ' ಎಂದೇ ಕರೆಯಲ್ಪಡುತ್ತಿದ್ದ ಹಿಂದೂಸ್ಥಾನ್ ಮೆಷಿನ್ ಟೂಲ್ಸ್ (ಎಚ್ಎಂಟಿ) ಕಂಪೆನಿ ಒಡೆತನದ ಜಮೀನನ್ನು ಕರ್ನಾಟಕ ಸರಕಾರ ಇಸ್ರೋಗೆ ಹಸ್ತಾಂತರಿಸುವ ಮೂಲಕ, ಎಚ್ಎಂಟಿ ಸಂಸ್ಥೆಯ ಗತವೈಭವದ ಕೊನೆಯ ಟಿಕ್ ಟಿಕ್ ಸದ್ದು ಇತಿಹಾಸದ ಪುಟಕ್ಕೆ ಸೇರಿದೆ.
ಎಪಿಎಂಸಿ ಮಾರುಕಟ್ಟೆಯ ಪಕ್ಕದ ಸುಮಾರು 120 ಎಕರೆ ಜಮೀನಿನಲ್ಲಿ ಹರಡಿಕೊಂಡಿದ್ದ ಎಚ್ ಎಂ ಟಿ ಕಂಪೆನಿಯನ್ನು ಮುಚ್ಚುವ ನಿರ್ಧಾರಕ್ಕೆ ಈ ಹಿಂದೆಯೇ ಕೇಂದ್ರ ಸರಕಾರ ಬಂದಿತ್ತು. ಪ್ರಧಾನಿ ಮೋದಿವರ 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆ, ಎಚ್ಎಂಟಿ ಮತ್ತೆ ಮಾರುಕಟ್ಟೆಗೆ ಬರಬಹುದು ಎನ್ನುವ ಕಾರ್ಮಿಕರ ಆಶಾಕಿರಣ, ಎರಡು ವರ್ಷದ ಹಿಂದೆಯೇ ಕಮರಿಹೋಗಿತ್ತು.
ಸಂಸ್ಥೆಯ ಒಡೆತನದಲ್ಲಿದ್ದ 109.32 ಎಕರೆ ಜಮೀನನ್ನು ಉಪಮುಖ್ಯಮಂತ್ರಿ ಡಾ.ಪರಮೇಶ್ವರ್, ಇಸ್ರೋ ಸಂಸ್ಥೆಗೆ ಶನಿವಾರ (ಜು 14) ಸಾಂಕೇತಿವಾಗಿ ಹಸ್ತಾಂತರಿಸಿದರು. ಇಸ್ರೋ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್ ಕುಮಾರಸ್ವಾಮಿಯವರಿಗೆ ಜಮೀನು ಒಡೆತನದ ಪರಭಾರೆ ಮಾಡಿದರು.

ಸುಮಾರು ನಲವತ್ತು ವರ್ಷದಿಂದ ಸಂಸ್ಥೆಗೆ ದುಡಿಯುತ್ತಿರುವ ನೌಕರರ ಮಕ್ಕಳಿಗೆ ಅವರ ಅರ್ಹತೆಗೆ ತಕ್ಕಂತೆ ಇಸ್ರೋದಲ್ಲಿ ಕೆಲಸ ನೀಡಬೇಕೆಂದು ಪರಮೇಶ್ವರ್ ಈ ಸಂದರ್ಭದಲ್ಲಿ ಮನವಿ ಮಾಡಿದರು. 2016ರಲ್ಲೇ ಎಚ್ಎಂಟಿ ಮತ್ತು ಎಚ್ಎಂಟಿ ಬೇರಿಂಗ್ಸ್ ಸಂಸ್ಥೆಯನ್ನು ಮುಚ್ಚುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿತ್ತು.
ಶ್ರೀನಗರ, ಬೆಂಗಳೂರು ಮತ್ತು ತುಮಕೂರು, ರಾಣಿಭಾಗ್ ಹೀಗೆ ನಾಲ್ಕು ಕಡೆ ಎಚ್ಎಂಟಿ ಕೈಗಡಿಯಾರ ಘಟಕಗಳು ಕೆಲಸ ನಿರ್ವಹಿಸುತ್ತಿದ್ದವು. ಇವುಗಳ ಪೈಕಿ ತುಮಕೂರು ನಲ್ಲಿನ ಎಚ್.ಎಂ.ಟಿ. ಕಾರ್ಖಾನೆ ನಾಲ್ಕನೆಯ ಘಟಕವಾಗಿ 1978ರಲ್ಲಿ ಸ್ಥಾಪನೆಯಾಗಿ, ಅತ್ಯಂತ ಸಕ್ರಿಯವಾಗಿದ್ದ ಘಟಕ ಎಂದೇ ಹೆಸರಾಗಿತ್ತು.
ವರ್ಷಕ್ಕೆ ಸುಮಾರು 20 ಲಕ್ಷ ವಾಚು ತಯಾರಿಸುವ ಸಾಮರ್ಥ್ಯ ಹೊಂದಿದ್ದ ತುಮಕೂರು ಘಟಕ, 2,200 ಕಾರ್ಮಿಕರನ್ನು ಹೊಂದಿತ್ತು. 10 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಕಾಂಟ್ರ್ಯಾಕ್ಟ್ ಮೂಲಕ ಉದ್ಯೋಗ ಒದಗಿಸಿದ್ದ ಹಿರಿಮೆ ಇದರದ್ದಾಗಿತ್ತು.
ಹಸ್ತಾಂತರದ ವೇಳೆ ಸಂಸದ ಮುದ್ದಹನುಮೇಗೌಡ, ಸಚಿವರಾದ ಎಸ್ ಆರ್ ಶ್ರೀನಿವಾಸ್, ವೆಂಕಟರಮಣಪ್ಪ ಮುಂತಾದವರು ಭಾಗವಹಿಸಿದ್ದರು.












Click it and Unblock the Notifications