ಜೆಡಿಎಸ್ ಜೊತೆ ಮತ್ತೆ ಕೈಜೋಡಿಸುವ ಬಗ್ಗೆ ಮಾತನಾಡಿದ ಪರಂ
ತುಮಕೂರು, ನವೆಂಬರ್ 29: ಹಳೇ ದೋಸ್ತಿ ಜೆಡಿಎಸ್ ಜೊತೆ ಮತ್ತೆ ಕೈ ಜೋಡಿಸುವ ಕುರಿತು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿದ್ದಾರೆ. ಪುನಃ ಮೈತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರಬಹುದು ಇಲ್ಲವೇ ಜೆಡಿಎಸ್ ಜೊತೆ ಮೈತ್ರಿ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಯಾವ ಅನರ್ಹ ಶಾಸಕರು ಗೆಲ್ಲಲ್ಲ, ರಾಜ್ಯದ ಜನ ಅವರನ್ನು ಸೋಲಿಸಲಿದ್ದಾರೆ, ಪಕ್ಷಾಂತರ ಮಾಡಿದವರಿಗೆ ಜನ ಬುದ್ದಿ ಕಲಿಸಲಿದ್ದಾರೆ ಎಂದರು. ಎಲ್ಲ ಅನರ್ಹ ಶಾಸಕರು ಸೋಲಲಿದ್ದಾರೆ ಎಂಬ ಮಾಹಿತಿ ನಮಗೆ ಇದೆ. ಈ ಉಪ ಚುನಾವಣೆ ಎಲ್ಲರ ಗಮನ ಸೆಳೆದಿದೆ ಎಂದರು.

ಪಕ್ಷಾಂತರ ಮಾಡೋರಿಗೆ ರಾಜ್ಯದ ಜನ ಪಾಠ ಕಲಿಸಲು ಮುಂದೆ ಬಂದಿದ್ದಾರೆ, ಈ ಮೂಲಕ ಉತ್ತಮ ಸಂದೇಶ ಕೊಡಲಿದ್ದಾರೆ. ಸದ್ಯ ಮಧ್ಯಂತರ ಚುನಾವಣೆ ಬರದಿಲ್ಲ ಆದರೂ ನಾವು ಎಲ್ಲದಕ್ಕೂ ತಾಯಾರಾಗಿದ್ದೇವೆ.
ಒಂದು ವೇಳೆ ಈ ಉಪ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಕಳೆದುಕೊಂಡರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಕೈ ಜೋಡಿಸುವ ಸಾಧ್ಯತೆ ಇದೆ, ಅದರ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎನ್ನುವ ಮೂಲಕ ಮತ್ತೆ ಮೈತ್ರಿಯ ಸುಳಿವು ನೀಡಿದರು.
ಇತ್ತೀಚಿಗೆ ಜೆಡಿಎಸ್ ನವರನ್ನು ಕೋತಿಗಳು ಎಂದಿದ್ದ ಪರಮೇಶ್ವರ್, ಕೋತಿಗಳು ಅಂದ ತಕ್ಷಣ ಅವರು ಕೋತಿಗಳಾಗುತ್ತಾರೆಯೇ ಎಂದು ಮರು ಪ್ರಶ್ನಿಸಿದರು. ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತದೆಂದು ಹೇಳಕಾಗಲ್ಲ, ರಾಜ್ಯದ ದೃಷ್ಠಿಯಿಂದ ಮತ್ತೆ ಒಂದಾದರೂ ಆಗಬಹುದು ಎಂದರು.











Click it and Unblock the Notifications