ನಾಗತಿಹಳ್ಳಿ ಅರಣ್ಯದಲ್ಲಿಟ್ಟಿದ್ದ ಪಂಜರದಲ್ಲಿ ಚಿರತೆ ಬಿತ್ತು
ತುಮಕೂರು, ಡಿ. 10: ಅರಣ್ಯ ಇಲಾಖೆ ಮೂರು ತಿಂಗಳ ಹಿಂದೆ ಇಟ್ಟಿದ್ದ ಪಂಜರದಲ್ಲಿ ಹೆಣ್ಣು ಚಿರತೆಯೊಂದು ಬುಧವಾರ ಪತ್ತೆಯಾಗಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನಾಗತಿಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಮೂರು ತಿಂಗಳುಗಳ ಹಿಂದೆಯೇ ಪಂಜರವೊಂದನ್ನು ಇಟ್ಟಿತ್ತು. ಇದರಲ್ಲಿ 7 ವರ್ಷ ವಯಸ್ಸಿನ ಹೆಣ್ಣು ಚಿರತೆ ಬಿದ್ದಿದೆ. ಈ ವಿಷಯ ಗ್ರಾಮದಲ್ಲಿ ಹರಡಿ ಜನರು ಆತಂಕಗೊಂಡಿದ್ದಾರೆ.
ತಿಪಟೂರು ತಾಲೂಕಿನ ಕಾರಿಕಲ್ಲುಗುಡ್ಡ ಗ್ರಾಮಸ್ಥರು ಚಿರತೆ ಹಾವಳಿ ಕುರಿತು ಅನೇಕ ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು. [ಮಹಿಳೆ ಕೊಂದಿದ್ದ ಹುಲಿ ಸೆರೆ]
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಲ್ಲಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ಬಿ.ಎಸ್., "ಈ ಚಿರತೆಯು ಆಗಾಗ ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅನೇಕ ಬಾರಿ ಕುರಿ, ಆಡು, ಜಾನುವಾರು ಹಾಗೂ ನಾಯಿಗಳನ್ನು ಹತ್ಯೆಗೈದಿದೆ. ಆದರೆ, ಇದುವರೆಗೂ ಮಾನವರ ಮೇಲೆ ದಾಳಿ ನಡೆಸಿಲ್ಲ" ಎಂದು ತಿಳಿಸಿದ್ದಾರೆ.
ಹೆಣ್ಣು ಹುಲಿ ಸಾವು: ಮೈಸೂರಿನ ಬಂಡೀಪುರದ ಹುಲಿ ಅಭಯಾರಣ್ಯ ಪ್ರದೇಶದಲ್ಲಿರುವ ಮೂಲಾಪುರ ಬೆಟ್ಟದಲ್ಲಿ 6ರಿಂದ 8 ವರ್ಷ ವಯಸ್ಸಿನ ಹೆಣ್ಣು ಹುಲಿಯೊಂದರ ಶವ ಪತ್ತೆಯಾಗಿದೆ. ಹುಲಿಯ ದೇಹದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಗಾಯಗಳಾಗಿವೆ. [ಚೆನ್ನೈ ಮೃಗಾಲಯದಿಂದ ಓಡಿಹೋದ ಹುಲಿ]
ಈ ಹುಲಿ ಸುಮಾರು 48 ಗಂಟೆಗಳಿಗಿಂತ ಮೊದಲೇ ಮೃತಪಟ್ಟಿದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹುಲಿಯ ದೇಹದಲ್ಲಿ ಸಾಕಷ್ಟು ಗಾಯಗಳಿವೆ. ಮತ್ತೊಂದು ಹುಲಿ ಜೊತೆ ಕಾದಾಟ ನಡೆಸಿ ಈ ಗಾಯ ಸಂಭವಿಸಿರಬಹುದು. [ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ]
ಇದು ಹುಲಿಗಳು ವಂಶಾಭಿವೃದ್ಧಿ ಕೈಗೊಳ್ಳುವ ಸಂದರ್ಭ. ಈ ಸಮಯದಲ್ಲಿ ಹುಲಿಗಳ ಮಧ್ಯೆ ಕಾದಾಟ ಸಂಭವಿಸುವುದು ಸಾಮಾನ್ಯ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.