ಶ್ರೀಗಳ ಆರೋಗ್ಯ ಚೇತರಿಕೆಯನ್ನು ಕಾಲವೇ ನಿರ್ಧರಿಸಬೇಕು: ವೈದ್ಯ ರವೀಂದ್ರ
ತುಮಕೂರು, ಜನವರಿ 17: ಸಿದ್ದಗಂಗಾ ಶ್ರೀಗಳಿಗೆ ಎಲ್ಲ ರೀತಿಯ ಅಗತ್ಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಆದರೆ ಈ ವಯಸ್ಸಿನಲ್ಲಿ ಚಿಕಿತ್ಸೆಗೆ ದೇಹ ಸ್ಪಂದಿಸುವುದು ಸುಲಭವಲ್ಲ ಎಂದು ಸಿದ್ದಗಂಗಾ ಶ್ರೀಗಳ ಆಪ್ತ ವೈದ್ಯ ರವೀಂದ್ರ ಅವರು ಹೇಳಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಶ್ರೀಗಳ ಆರೋಗ್ಯದ ಬಗ್ಗೆ ಮಾತನಾಡಿದ ಅವರು, ಶ್ರೀಗಳು ಸ್ವಲ್ಪವೇ ಸ್ವ-ಶಕ್ತಿಯಿಂದ ಉಸಿರಾಡುತ್ತಿದ್ದಾರೆ. ಅವರಿಗೆ ವೆಂಟಿಲೇಟರ್ ಬೆಂಬಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀಗಳ ದೇಹದಲ್ಲಿ ಆಲ್ಬುಮಿನ್ ಉತ್ಪಾದನೆ ಪೂರ್ಣವಾಗಿ ನಿಂತಿದೆ. ಆಲ್ಬುಮಿನ್ ಅನ್ನು ಹೊರಗಿನಿಂದ ನೀಡಲಾಗುತ್ತಿದೆ. ಇದರಿಂದ ಅವರ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದೆ ಎಂದು ರವೀಂದ್ರ ಅವರು ಹೇಳಿದರು.

ಈಗ ಆಂಟಿಬಯೋಟಿಕ್, ನ್ಯೂಟ್ರಿಶನ್ ಕೊಡುತ್ತಿದ್ದೇವೆ, ಹೃದಯಬಡಿತ, ಬಿಪಿ ಸಮಚಿತ್ತದಲ್ಲಿರಲು ಹಾಗೂ ಪ್ರೋಟೀನ್ ವೃದ್ಧಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಆದರೆ ನಾವು ನಿರೀಕ್ಷಿಸಿದಷ್ಟು ಚೇತರಿಕೆ ಕಾಣುತ್ತಿಲ್ಲ. ಒಂದು ತಿಂಗಳಿಂದಲೂ ಪ್ರೋಟೀನ್ ವೃದ್ಧಿ ಆಗಿಲ್ಲ, ಪ್ರೋಟೀನ್ ವೃದ್ಧಿಸಿದರೆ ಶ್ರೀಗಳು ಚೇತರಿಸಿಕೊಂಡು ಬಿಡುತ್ತಾರೆ ಎಂದು ಅವರು ಹೇಳಿದರು.
112ನೇ ವಯಸ್ಸಿನಲ್ಲಿ ಸರ್ಜರಿ ಮಾಡುವುದು, ಶೀಘ್ರ ಚೇತರಿಕೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಶ್ರೀಗಳ ವಿಚಾರದಲ್ಲಿ 100% ರಷ್ಟು ನಿರೀಕ್ಷೆ ಇಟ್ಟುಕೊಳ್ಳುವುದು ಸಾಧ್ಯವಿಲ್ಲ, ಶ್ರೀಗಳ ಆರೋಗ್ಯವನ್ನು ಕಾಲವೇ ನಿರ್ಧರಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.












Click it and Unblock the Notifications