ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ ಡಿಕೆ ರವಿ ಕುಟುಂಬ
ತುಮಕೂರು, ಮೇ 23 : ಡಿಕೆ ರವಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಆರೋಪಿಸಿರುವ ರವಿ ಅವರ ಕುಟುಂಬ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕಾರ ಮಾಡಿದೆ. ಜೂನ್ 2ರಂದು ತುಮಕೂರು ಜಿಲ್ಲೆಯಲ್ಲಿ ಚುನಾವಣೆ ನಡೆಯಲಿದೆ.
ದೊಡ್ಡಕೊಪ್ಪಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ರವಿ ಅವರ ಸಹೋದರ ರಮೇಶ್ ಅವರು, 'ರಾಜ್ಯ ಸರ್ಕಾರ ಸುಳ್ಳು ವದಂತಿಗಳನ್ನು ಹಬ್ಬಿಸುವ ಮೂಲಕ ತನಿಖೆಯ ದಾರಿ ತಪ್ಪಿಸುತ್ತಿದೆ. ಇದರಿಂದ ಕುಟುಂಬದವರಿಗೆ ನೋವಾಗಿದ್ದು, ಆದ್ದರಿಂದ ಚುನಾವಣೆ ಬಹಿಷ್ಕಾರ ಮಾಡಲಾಗುತ್ತಿದೆ' ಎಂದರು. [ಡಿಕೆ ರವಿ ಲವ್ ಅಫೇರ್ ಎಲ್ಲಾ ಕಟ್ಟುಕಥೆ ಎಂದ ಸಿಬಿಐ]

'ರವಿ ಅವರ ಸಾವಿನ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸುವುದನ್ನು ವಿಳಂಬ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿತ್ತು. ಇದರಿಂದ ಆದ ನಷ್ಟವನ್ನು ತುಂಬಿಕೊಳ್ಳಲು, ಈಗ ವದಂತಿಗಳನ್ನು ಹಬ್ಬಿಸಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದೆ' ಎಂದು ರಮೇಶ್ ಆರೋಪಿಸಿದ್ದಾರೆ. [ಸಾವನ್ನಪ್ಪುವ ದಿನ ಡಿಕೆ ರವಿಗೆ ಬಂದಿದ್ದು 4 ಕರೆ]
'120 ಕೋಟಿಗೂ ಅಧಿಕ ತೆರಿಗೆಯನ್ನು ಸರ್ಕಾರಕ್ಕೆ ವಸೂಲಿ ಮಾಡಿಕೊಟ್ಟ ರವಿ ಅವರು ಭ್ರಷ್ಟರಾಗಿದ್ದರೆ ಕೋಟಿ-ಕೋಟಿ ಹಣ ಸಂಪಾದನೆ ಮಾಡಬಹುದಿತ್ತು. ಇಂದು ಸಹ ಅವರ ತಂದೆ ಹೊಲದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇರಲಿಲ್ಲ' ಎಂದು ರಮೇಶ್ ಹೇಳಿದ್ದಾರೆ. [ಡಿಕೆ ರವಿ ತಾಯಿ ಗೌರಮ್ಮನವರ ಸಂದರ್ಶನ]
ಅಂದಹಾಗೆ ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಮೇ 29ರಂದು ನಡೆಯಲಿದೆ. ಎರಡನೇ ಹಂತದಲ್ಲಿ ತುಮಕೂರು ಜಿಲ್ಲೆಯಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 2ರಂದು ಮತದಾನ ನಡೆಯಲಿದೆ. [ಪಂಚಾಯಿತಿ ಚುನಾವಣೆ ವೇಳಾಪಟ್ಟಿ]












Click it and Unblock the Notifications