Breaking: ತುಮಕೂರು ಗ್ರಾ. ಶಾಸಕ ಗೌರಿಶಂಕರ್ ವಿರುದ್ಧ ಪ್ರಕರಣ
ತುಮಕೂರು, ನ.25: "ತುಮಕೂರು ಗ್ರಾಮಾಂತರ ಶಾಸಕ ಡಿಸಿ ಗೌರಿ ಶಂಕರ್ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ'' ಎಂದು ಬಿಜೆಪಿ ಮಾಜಿ ಶಾಸಕ ಬಿ. ಸುರೇಶ್ ಗೌಡ ದೂರು ನೀಡಿದ್ದು, ಶಾಸಕ ಡಿಸಿ ಗೌರಿಶಂಕರ್, ಹಿರೇಹಳ್ಳಿ ಮಹೇಶ್, ಬೊಮ್ಮನಹಳ್ಳಿ ಬಾಬು ಸೇರಿದಂತೆ ಅಪರಿಚಿತ ವ್ಯಕ್ತಿಗಳ ಮೇಲೆ ದೂರು ದಾಖಲಾಗಿದೆ.
ಮಾಜಿ ಶಾಸಕ ಬಿ. ಸುರೇಶ್ ಗೌಡ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಶಾಸಕ ಡಿಸಿ ಗೌರಿ ಶಂಕರ್ ಮತ್ತು ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದಾರೆ.
ನನ್ನನ್ನು ಕೊಲ್ಲಿಸಲು ಜೆಡಿಎಸ್ ಶಾಸಕ ಗೌರಿಶಂಕರ್ ಸಂಚು ರೂಪಿಸಿದ್ದಾರೆ: ಸುರೇಶ್ ಗೌಡ
ಈ ಹಿನ್ನೆಲೆ ಹಿರೇಹಳ್ಳಿ ಮಹೇಶ್, ಶಾಸಕ ಡಿಸಿ ಗೌರಿಶಂಕರ್, ಬೊಮ್ಮನಹಳ್ಳಿ ಬಾಬು ಮತ್ತು ಅವರ ಬೆಂಬಲಿಗರ ಮೇಲೆ ಪೊಲೀಸರು, IPC 1860 ( 120B, 506, 109, 34) ಅಡಿ ದೂರು ದಾಖಲಿಸಿಕೊಂಡಿದ್ದಾರೆ.
ಹಾಲಿ ಶಾಸಕ ಗೌರಿಶಂಕರ್ ನನ್ನನ್ನು ಕೊಲೆ ಮಾಡಿಸಲು ಸಂಚು ರೂಪಿಸಿ ಬೆಂಗಳೂರಿನ ಜೈಲಿನಲ್ಲಿ ಇರುವ ಕೈದಿಗಳಿಗೆ ಸುಫಾರಿ ಕೊಟ್ಟಿದ್ದಾರೆ ಎಂಬುದು ಮಾಜಿ ಶಾಸಕ ಸುರೇಶ್ ಗೌಡ ಆರೋಪವಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರ ಗ್ರಾಮವೊಂದರಲ್ಲಿ ನಡೆದಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುರೇಶ್ ಗೌಡ ಕೊಲೆ ಯತ್ನ ಆರೋಪ ಮಾಡಿದ್ದರು.
"ನನ್ನ ಕೊಲೆ ಮಾಡಿಸುವುದಕ್ಕೆ ಸಂಚು ರೂಪಿಸಿದ್ದೀಯಾ?. ಇದೆಲ್ಲಾ ನಡೆಯಲ್ಲ. ಇದಕ್ಕೆಲ್ಲಾ ನನ್ನ ಕಾರ್ಯಕರ್ತರು ಬಿಡಲ್ಲ. ಯಾವನೋ ಹಣ ಕೊಡ್ತಾನಂತೆ, ಮತ್ತೊಬ್ಬ ಸುಪಾರಿ ಕೊಡ್ತಾನಂತೆ. ನೀವೇನೆ ಮಾಡಿದರೂ ನನ್ನ ಕೂದಲನ್ನು ಮುಟ್ಟಕ್ಕಾಗಲ್ಲ" ಎಂದು ಸುರೇಶ್ ಗೌಡ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯರ ನೀಡಿದ್ದ ಜೆಡಿಎಸ್ ಶಾಸಕ ಗೌರಿಶಂಕರ್, 'ಸುರೇಶ್ ಗೌಡಗೆ ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಸೋಲುವ ಹತಾಶೆಯಿಂದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ತನಿಖೆ ಮಾಡಿಸಲಿ. ಅದು ಬಿಟ್ಟು ಸುಳ್ಳು ಆರೋಪ ಮಾಡಬಾರದು' ಎಂದಿದ್ದರು.