ವಯನಾಡಿನಲ್ಲಿ ನಿಂತು ಸಿಪಿಐಎಂ ಬಗ್ಗೆ ಸೊಲ್ಲೆತ್ತಲ್ಲ ಎಂದ ರಾಹುಲ್
ವಯನಾಡು, ಏಪ್ರಿಲ್ 04: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ತಮ್ಮ ಪರಿವಾರ ಸಮೇತ ದೇವರನಾಡಿನಲ್ಲಿ ಬೀಡುಬಿಟ್ಟಿದ್ದಾರೆ. ಕಲ್ಪೆಟ್ಟದಿಂದ ವಯನಾಡಿನ ಜಿಲ್ಲಾಧಿಕಾರಿಗಳ ಕಚೇರಿ ಬಂದು ಲೋಕಸಭೆಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಾಮಪತ್ರ ಸಲ್ಲಿಸುವ ವೇಳೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಹುಲ್ ಅವರ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉಪಸ್ಥಿತರಿದ್ದರು. ವಯನಾಡಿನ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಿದ ರಾಹುಲ್-ಪ್ರಿಯಾಂಕಾ ಅವರು ಅಪಾರ ಸಂಖ್ಯೆಯ ಕಾರ್ಯಕರ್ತರೊಡನೆ ರೋಡ್ ಶೋ ನಡೆಸಿ, ಮೆರವಣಿಗೆಯಲ್ಲಿ ಸಾಗಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ನಾನು ದಕ್ಷಿಣ ಭಾರತದಲ್ಲಿ ಶಾಂತಿ, ಸೌಹಾರ್ದತೆ ಹಂಚಲು ಬಂದಿದ್ದೇನೆ. ಇದು ಸಿಪಿಎಂ ಕ್ಷೇತ್ರ ಅವರು ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ಆದರೆ, ಅದು ಅನಿವಾರ್ಯ. ಆದರೆ, ನಾನು ಬೇಜಾರು ಮಾಡ್ಕೊಳ್ಳಲ್ಲ, ನೊಂದುಕೊಳ್ಳಲ್ಲ, ಕೋಪ ಮಾಡ್ಕೊಳ್ಳಲ್ಲ, ಅವರ ವಿರುದ್ಧ ಒಂದು ಮಾತಾಡಲ್ಲ. ನನ್ನ ಉದ್ದೇಶ ಶಾಂತಿ, ಸೌಹಾರ್ದತೆ ಸ್ಥಾಪನೆ ಎಂದಿದ್ದಾರೆ. ಇಲ್ಲಿನ ಜನರ ವಿರುದ್ಧ ಸಾಂಸ್ಕೃತಿಕವಾಗಿ, ಭಾಷೆ, ಸಿದ್ಧಾಂತ ದಾಳಿಯಾಗುತ್ತಿದೆ ಇದನ್ನು ತಪ್ಪಿಸಬೇಕಿದೆ. ಶಾಂತಿ ಸಂದೇಶವನ್ನು ಇಡೀ ಭಾರತಕ್ಕೆ ಹಂಚಬೇಕಿದೆ ಎಂದರು.

"ನಾವು ದಕ್ಷಿಣ ಭಾರತೀಯರನ್ನು ಕಡೆಗಣಿಸುತ್ತಿದ್ದೇವೆ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಂಥ ಸನ್ನಿವೇಶವನ್ನು ಪ್ರಧಾನಿ ನರೇಂದ್ರ ಮೋದಿ ಸೃಷ್ಟಿಸಿದ್ದಾರೆ. ಈ ಭಾವನೆಯನ್ನು ಹೋಗಲಾಡಿಸಿ, ಅಲ್ಲಿನ ಜನರಲ್ಲಿ ಭದ್ರತೆಯ ಭಾವನೆ ಮೂಡಿಸಬೇಕಿದೆ. ಆದ್ದರಿಂದ ನಾನು ಅಲ್ಲಿಂದ ಚುನಾವಣೆಗೆ ನಿಂತಿದ್ದೇನೆ" ಎಂದು ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.
ನಾಮಪತ್ರ ಸಲ್ಲಿಕೆ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಮುಖಂಡರಾದ ರಮೇಶ್ ಚೆನ್ನಿತಾಲ, ಮುಕುಲ್ ವಾಸ್ನಿಕ್, ಕೆಸಿ ವೇಣುಗೋಪಾಲ್, ಉಮ್ಮನ್ ಚಾಂಡಿ, ಮುಳ್ಳಪಲ್ಲಿ ರಾಮಚಂದ್ರನ್ ಮುಂತಾದವರು ಜೊತೆಯಾಗಿದ್ದರು.












Click it and Unblock the Notifications