ದೇವರನ್ನು ಭೇಟಿಯಾಗಲು ಕಲ್ಯಾಣಿಯಿಂದ ದೇವಸ್ಥಾನದೊಳಗೆ ಬಂದ ಮೊಸಳೆ
ತಿರುವನಂತಪುರಂ, ಅಕ್ಟೋಬರ್ 22: ಮೊಸಳೆಯೊಂದು ದೇವರನ್ನು ಭೇಟಿಯಾಗಲು ದೇಗುಲದ ಪ್ರಾಂಗಣಕ್ಕೆ ಬಂದಿರುವ ಫೋಟೊ ಇದೀಗ ವೈರಲ್ ಆಗಿದೆ.
ಇದು ಕರ್ನಾಟಕ, ಕೇರಳದ ಗಡಿಭಾಗದ ಕಾಸರಗೋಡು ಜಿಲ್ಲೆಯ ಕುಂಬಳೆಯರುವ ಅನಂತಪುರ ಕ್ಷೇತ್ರ. ಅನಂತಪುರದ ಅನಂತಪದ್ಮನಾಭ ದೇಗುಲ ಕೆರೆಯ ನಡುವೆ ನಿರ್ಮಾಣವಾಗಿದೆ.
ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಇದು ಎಂಬ ನಂಬಿಕೆಯೂ ಇದೆ. ಹೀಗೆ ತನ್ನ ಖ್ಯಾತಿಯಿಂದಲೇ ಭಕ್ತರನ್ನು ಹೊಂದಿರುವ ಈ ಪವಿತ್ರ ದೇವ ಸನ್ನಿಧಿ ಸಸ್ಯಾಹಾರಿ ಮೊಸಳೆಯ ಕಾರಣದಿಂದಲೂ ಎಲ್ಲರ ಗಮನ ಸೆಳೆದಿದೆ. ಅದರ ಹೆಸರೇ ಬಬಿಯಾ.

ಇಷ್ಟು ದಿನ ದೇಗುಲದ ಕಲ್ಯಾಣಿಯಲ್ಲಿ ಇರುತ್ತಿದ್ದ ಬಬಿಯಾ ಇದೇ ಮೊದಲ ಬಾರಿಗೆ ದೇಗುಲದ ಒಳಗೆ ಬಂದಿದೆ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಲ್ಲದೆ, ಬಬಿಯಾ ದೇಗುಲದ ಆವರಣದೊಳಗೆ ಬಂದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಮೊಸಳೆ ಸುಮಾರು 70 ವರ್ಷಗಳಿಂದ ಇದೇ ಕೊಳದಲ್ಲಿದೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ, ಬಬಿಯಾನಿಂದ ಇದುವರೆಗೆ ಯಾರೂ ತೊಂದರೆಗೊಳಗಾದ ಉದಾಹರಣೆಯೇ ಇಲ್ಲ. ದೇವರಿಗೆ ಅರ್ಪಿಸಿದ ನೈವೇದ್ಯವನ್ನೇ ತಿಂದು ಇದು ಕೂಡಾ ಬದುಕುತ್ತಿದೆ.
ದೇವಸ್ಥಾನದ ಪ್ರಾಂಗಣದೊಳಗೆ ಬಂದ ಬಬಿಯಾ ಒಂದಷ್ಟು ಹೊತ್ತು ಇಲ್ಲೇ ಕಳೆದಿತ್ತು. ಬಳಿಕ ದೇಗುಲದ ಪ್ರಧಾನ ಅರ್ಚಕ ಚಂದ್ರಪ್ರಕಾಶ್ ನಂಬಿಸನ್ ತನ್ನ ಶಾಶ್ವತ ಆವಾಸಸ್ಥಾನಕ್ಕೆ ಹೋಗುವಂತೆ ಕೇಳಿಕೊಂಡ ಬಳಿಕ ಇದು ಕೊಳಕ್ಕೆ ಹಿಂತಿರುಗಿದೆ' ಎಂದು ದೇವಾಲಯದ ಅಧಿಕಾರಿ ಚಂದ್ರಶೇಖರನ್ ಹೆಚ್.ಟಿ. ಹೇಳಿದ್ದಾಗಿ ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.
ಬಬಿಯಾ ಸಸ್ಯಾಹಾರಿ ಮೊಸಳೆ ಎಂದೇ ಪ್ರಖ್ಯಾತ. ಈ ಮೊಸಳೆ ಕೊಳಕ್ಕೆ ಹೇಗೆ ಬಂತು. ಇದಕ್ಕೆ ಬಬಿಯಾ ಎಂದು ಹೆಸರಿಟ್ಟವರು ಯಾರು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಪ್ರಧಾನ ಅರ್ಚಕರ ಮಾತು ಕೇಳಿ ಅದು ಹಿಂದುರುಗಿ ಹೋಗಿರುವುದು ಸತ್ಯದ ಸಂಗತಿ.












Click it and Unblock the Notifications