ತಿರುವನಂತಪುರ-ಕಾಸರಗೋಡು ನಡುವೆ ಸೆಮಿ ಹೈಸ್ಪೀಡ್ ರೈಲು
ತಿರುವನಂತಪುರ, ಫೆಬ್ರವರಿ 08; ತಿರುವನಂತಪುರ- ಕಾಸರಗೋಡು ನಡುವಿನ ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಯೋಜನೆಗೆ 64 ಸಾವಿರ ಕೋಟಿ ರೂ. ಸಂಪನ್ಮೂಲ ಕ್ರೋಡಿಕರಣ ಮಾಡುವುದಕ್ಕೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ.
ಕೇರಳ ಸರ್ಕಾರದ ಉದ್ದೇಶಿತ ಸೆಮಿ ಹೈಸ್ಪೀಡ್ ರೈಲು ಯೋಜನೆ 529.45 ಕಿ. ಮೀ. ಅಂತರವನ್ನು ಹೊಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಪತ್ರವನ್ನು ಬರೆದಿದ್ದಾರೆ.
ಸಂಬಂಧಿಸಿದ ಅನುಮೋದನೆಗಳ ಬಳಿಕ ಯೋಜನೆಯ ನೋಡಲ್ ಏಜೆನ್ಸಿ ಕೇರಳ ರೈಲು ಅಭಿವೃದ್ಧಿ ನಿಗಮ (ಕೆ-ರೈಲ್) ಯೋಜನೆ ಸಂಬಂಧ ಭೂಸ್ವಾಧೀನವನ್ನು ಆರಂಭಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸೆಮಿ ಹೈಸ್ಪೀಡ್ ರೈಲು ಯೋಜನೆಯನ್ನು ಜಾರಿಗೊಳಿಸಲು ಕೇರಳ ಸರ್ಕಾರ ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಟಿವ್ ಏಜೆನ್ಸಿ ಜೊತೆಗೂಡಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 5 ತಿಂಗಳ ಹಿಂದೆ ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ಎಡಿಬಿಐನಿಂದ ಸಾಲ ಪಡೆಯಲು ಅನುಮತಿ ಕೇಳಿ ಪತ್ರವನ್ನು ಬರೆದಿದ್ದರು. ಕಳೆದ ತಿಂಗಳು ಮಂಡನೆಯಾದ ಕೇರಳ ಬಜೆಟ್ನಲ್ಲಿಯೂ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳುವ ಪ್ರಸ್ತಾಪವನ್ನು ಘೋಷಣೆ ಮಾಡಲಾಗಿತ್ತು.
2019ರಲ್ಲಿ ಮೊದಲು ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಪ್ಯಾರೀಸ್ ಮೂಲದ ಕಂಪನಿಯೊಂದು ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರು ಮಾಡಿತ್ತು. ಯೋಜನೆಗೆ 185 ಹೆಕ್ಟೇರ್ ರೈಲ್ವೆ ಭೂಮಿ, 1,198 ಹೆಕ್ಟೇರ್ ಖಾಸಗಿ ಭೂಮಿ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ರೈಲು ಯೋಜನೆ ಪೂರ್ಣಗೊಂಡರೆ 529.45 ಕಿ. ಮೀ. ಅಂತರವನ್ನು 4 ಗಂಟೆಯಲ್ಲಿ ಕ್ರಮಿಸಬಹುದಾಗಿದೆ. ಪ್ರಸ್ತುತ ತಿರುವನಂತಪುರ-ಕಾಸರಗೋಡು ನಡುವಿ ಪ್ರಯಾಣದ ಅವಧಿ 12 ಗಂಟೆಗಳು.
ಸೆಮಿ ಹೈಸ್ಪೀಡ್ ರೈಲು ಯೋಜನೆಯಿಂದಾಗಿ ತಿರುವನಂತಪುರ-ಎರ್ನಾಕುಲಂ-ಕೊಚ್ಚಿ ಮಾರ್ಗವನ್ನು ರೈಲು 90 ನಿಮಿಷಗಳಲ್ಲಿ ಕ್ರಮಿಸಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications